ಬೆಳ್ತಂಗಡಿ: 'ಶಿಕ್ಷಣ ಸಂಸ್ಥೆ ಎಂಬುದು ಮಕ್ಕಳ ಭವಿಷ್ಯ ರೂಪಿಸುವ ಕೇಂದ್ರ. ಅದರಲ್ಲೂ ಸರ್ಕಾರಿ ಶಾಲೆಯೆಂದರೆ ಊರಿನ ದೇವಾಲಯವಿದ್ದಂತೆ' ಎಂದು ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು.
ಬಳಂಜದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ 75ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಶಾರದಾ ಕಲಾ ಮಂದಿರದಲ್ಲಿ ನಡೆದ ಚಿಂತನಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಬದುಕು ಕಟ್ಟೋಣ ತಂಡ ಈಗಾಗಲೇ ಐದು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದು ಇದಕ್ಕೆ ರೋಟರಿ ಕ್ಲಬ್ ಬೆಳ್ತಂಗಡಿ ಸಹಕಾರ ನೀಡುತ್ತಿದೆ. ಬಳಂಜ ಶಾಲಾ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಹೇಳಿದರು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತಭಟ್ ಮಚ್ಚಿಮಲೆ ಶಾಲಾ ನೂತನ ಕಟ್ಟಡದ ನೀಲಿ ನಕಾಶೆಯನ್ನು ಅನಾವರಣಗೊಳಿಸಿದರು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ನೆರವು ನೀಡಲು ಮುಂದೆ ಬರುತ್ತಿದ್ದು, ಇದನ್ನು ಪಡೆದುಕೊಳ್ಳಲು ಉತ್ತಮ ಸಂಘಟನೆ ಬೇಕು. ಇಂತಹ ಸಂಘಟನೆ ಬಳಂಜದಲ್ಲಿದ್ದು ಇಂತಹ ಸಂಘಟನೆಯೊಂದಿಗೆ ಎಲ್ಲರೂ ಕೈಜೋಡಿಸಿ ಬಳಂಜ ಶಾಲೆಯನ್ನು ಮಾದರಿಯಾಗಿಸಬೇಕು.ರೋಟರಿ ಸಂಸ್ಥೆ ಕೂಡ ಅಭಿವೃದ್ಧಿಯಲ್ಲಿ ಕೈಜೋಡಿಸಲಿದೆ' ಎಂದರು.
ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕಾರ್ಕಳ ಮಾತನಾಡಿ ‘ಶಾಲೆಯೊಳಗಿನ ವ್ಯವಸ್ಥೆಯಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಡಿ’ ಎಂದರು.
ಅಮೃತ ಮಹೋತ್ಸವ ಸಮಿತಿಯ ಗೌರವ ಮಾರ್ಗದರ್ಶಕ ಎಚ್ ದರ್ಣಪ್ಪ ಪೂಜಾರಿ ಟ್ರಸ್ಟ್ನ ಲೋಗೊ ಅನಾವರಣಗೊಳಿಸಿದರು. ಅಮೃತ ಮಹೋತ್ಸವದ ಗೌರವ ಮಾರ್ಗದರ್ಶಕ ಕೆ. ವಸಂತ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು.
ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಅದ್ಯಕ್ಷ ಚೈತ್ರೇಶ್ ಇಳಂತಿಲ, ಬಳಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಕುಲಾಲ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರತ್ನಾಕರ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಸುಲೋಚನಾ ಕೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರೆನಿಲ್ಡಾ ಜೋಸ್ ಮಥಾಯಸ್ ಇದ್ದರು.
ಅಮೃತ ಮಹೋತ್ಸವ ಸಮಿತಿ ಅದ್ಯಕ್ಷ ಚಂದ್ರಶೇಖರ ಪಿ.ಕೆ ಸ್ವಾಗತಿಸಿದರು. ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಹಾಸ್ ಬಳಂಜ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.