ADVERTISEMENT

ಮಂಗಳೂರು: ಇಕೊ ಕ್ಲಬ್‌ಗಳಿಗೆ ಮತ್ತೆ ‘ಜೀವಕಳೆ’

ಸಂಧ್ಯಾ ಹೆಗಡೆ
Published 17 ಅಕ್ಟೋಬರ್ 2024, 6:36 IST
Last Updated 17 ಅಕ್ಟೋಬರ್ 2024, 6:36 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮಂಗಳೂರು: ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಇಕೊ ಕ್ಲಬ್‌ಗಳ ಕಾರ್ಯಚಟುವಟಿಕೆ ಸಕ್ರಿಯಗೊಳಿಸುವ ಆಶಯದೊಂದಿಗೆ ಶಿಕ್ಷಣ ಇಲಾಖೆಯು ಈ ಬಾರಿ ಶಾಲೆಗಳಿಗೆ ಅನುದಾನ ಮಂಜೂರುಗೊಳಿಸಿದೆ. ಎರಡು ವರ್ಷಗಳ ನಂತರ ಸರ್ಕಾರಿ ಶಾಲೆಗಳಿಗೆ ಇಕೊ ಕ್ಲಬ್ ಚಟುವಟಿಕೆಗಳಿಗೆ ಅನುದಾನ ದೊರೆತಿದೆ.

ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ ಅಡಿಯಲ್ಲಿ 2024–25ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಕೊ ಕ್ಲಬ್ ಚಟುವಟಿಕೆ ನಡೆಸಲು ಒಟ್ಟು ₹50.28 ಲಕ್ಷ ಅನುದಾನ ಮಂಜೂರು ಆಗಿದೆ.

ADVERTISEMENT

ಪ್ರತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಲಾ ₹2,000ದಂತೆ ಜಿಲ್ಲೆಯ 238 ಕಿರಿಯ ಪ್ರಾಥಮಿಕ ಶಾಲೆಗಳಿಗೆ ಒಟ್ಟು ₹4.76 ಲಕ್ಷ, ಪ್ರತಿ ಹಿರಿಯ ಪ್ರಾಥಮಿಕ ಶಾಲೆಗೆ ₹5,000ದಂತೆ 651 ಹಿರಿಯ ಪ್ರಾಥಮಿಕ ಶಾಲೆಗಳಿಗೆ ಒಟ್ಟು ₹32.55 ಲಕ್ಷ, ಪ್ರತಿ ಪ್ರೌಢಶಾಲೆಗೆ ₹7,500ರಂತೆ ಒಟ್ಟು 173 ಪ್ರೌಢಶಾಲೆಗಳಿಗೆ ₹12.97 ಲಕ್ಷ ಅನುದಾನ ಮಂಜೂರು ಆಗಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಇಕೊ ಕ್ಲಬ್‌ಗೆ ಬಿಡುಗಡೆಯಾಗಿರುವ ಅನುದಾನವನ್ನು ನಿರ್ದಿಷ್ಟ ಕಾರ್ಯಕ್ರಮಕ್ಕೆ ಬಳಕೆ ಮಾಡುವಂತೆ ಇಲಾಖೆ ನಿರ್ದೇಶನ ನೀಡಿದೆ. ಹಸಿ ಕಸ ಮತ್ತು ಒಣ ಕಸ ಸಂಗ್ರಹ ಮತ್ತು ವಿಲೇವಾರಿಗೆ ವಿಶೇಷ ಒತ್ತು ನೀಡಲಾಗಿದೆ. ಕಸ ವಿಲೇವಾರಿಗೆ ಕೆಂಪು ಮತ್ತು ನೀಲಿ ಬಣ್ಣದ ದೊಡ್ಡ ಬುಟ್ಟಿಗಳನ್ನು ಖರೀದಿಸಲು ಸೂಚಿಸಲಾಗಿದೆ. ಶಾಲಾ ಹಂತದಲ್ಲೇ ಕಸ ವಿಲೇವಾರಿ ಜಾಗೃತಿ ಮೂಡಿಸುವುದು ಇದರ ಉದ್ದೇಶ ಎನ್ನುತ್ತಾರೆ ಡಿಡಿಪಿಐ ವೆಂಕಟೇಶ ಪಟಗಾರ್.

ಕೈತೋಟ ನಿರ್ಮಾಣ, ಗಿಡಗಳನ್ನು ನೆಡುವುದು, ಪರಿಸರ ಜಾಗೃತಿ ಚಟುವಟಿಕೆ ಕೈಗೊಳ್ಳಲು ತಿಳಿಸಲಾಗಿದೆ. ಮಕ್ಕಳಿಗೆ ನಿಸರ್ಗದೊಂದಿಗೆ ಬಾಂಧವ್ಯ ಬೆಳೆಸುವ ದೃಷ್ಟಿಯಿಂದ ವನ ಭೇಟಿ, ಪ್ರಕೃತಿಯೆಡೆಗೆ ನಡಿಗೆ ಕಾರ್ಯಕ್ರಮವನ್ನು ಜೋಡಿಸಲಾಗಿದೆ. ಶೈಕ್ಷಣಿಕ ವರ್ಷ ಕೊನೆಯಾಗುವ ಪೂರ್ವದಲ್ಲಿ ಅನುದಾನವನ್ನು ಸದ್ಬಳಕೆ ಮಾಡಿ, ಕಾರ್ಯಕ್ರಮ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

‘ಸರ್ಕಾರಿ ಶಾಲೆಗಳಲ್ಲಿ ರಚಿತವಾಗಿರುವ ಇಕೊ ಕ್ಲಬ್‌ಗಳಿಗೆ ಎರಡು ವರ್ಷಗಳಿಂದ ಸರ್ಕಾರದಿಂದ ಅನುದಾನ ದೊರೆಯದ ಕಾರಣ ಮಕ್ಕಳು ನಡೆಸುವ ಪರಿಸರ ಪೂರಕ ಕಾರ್ಯಗಳು ಕುಂಠಿತಗೊಂಡಿದ್ದವು. ಶಿಕ್ಷಕರ ಒತ್ತಾಸೆಯಿಂದ ಕೆಲವು ಶಾಲೆಗಳು ಮಾತ್ರ ಇಕೊ ಕ್ಲಬ್ ಅಡಿಯಲ್ಲಿ ಕೈತೋಟ ಸೃಷ್ಟಿ, ಔಷಧ ಸಸ್ಯ ನಾಟಿ, ಉದ್ಯಾನ ನಿರ್ಮಾಣ ಚಟುವಟಿಕೆ ನಡೆಸುತ್ತಿದ್ದವು. ಹಲವಾರು ಶಾಲೆಗಳು ಇಕೊ ಕ್ಲಬ್ ಅನುದಾನದಲ್ಲಿ ಕೈತೋಟ ರಚನೆ ಮಾಡಿ, ಅಲ್ಲಿ ಬೆಳೆದ ತರಕಾರಿಗಳನ್ನು ಬಿಸಿಯೂಟಕ್ಕೆ ಬಳಸುತ್ತಿದ್ದವು. ಎರಡು ವರ್ಷಗಳಿಂದ ಅನುದಾನ ದೊರೆಯದೆ ಕೈತೋಟಗಳು ಒಣಗಿದ್ದವು. ಈಗ ಪುನಃ ತರಕಾರಿ ತೋಟ ಚಿಗುರುವ ಕನಸು ಮೂಡಿದೆ’ ಎಂದು ಶಿಕ್ಷಕರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.