ಪುತ್ತೂರು: ಇಲ್ಲಿಗೆ ಸಮೀಪದ ಬನ್ನೂರಿನ ಜೈನರಗುರಿ ಎಂಬಲ್ಲಿ ಭಾರಿ ಮಳೆಯಿಂದಾಗಿ ಮಜೀದ್ ಎಂಬುವರ ಮನೆ ಮೇಲೆ ಧರೆ ಕುಸಿದು, ಗುರುವಾರ ನಸುಕಿನಲ್ಲಿ ಗೋಡೆ ನೆಲಕ್ಕುರುಳಿದೆ. ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳನ್ನು ತಂದೆಯೇ ರಕ್ಷಣೆ ಮಾಡಿದ್ದಾರೆ.
ಮಜೀದ್ ತಮ್ಮ ಇಬ್ಬರು ಮಕ್ಕಳ ಜೊತೆ ಮನೆಯ ಕೊಠಡಿಯಲ್ಲಿ ಮಲಗಿದ್ದರು. ಅವರು ನಿದ್ದೆಯಲ್ಲಿದ್ದಾಗ ಮನೆ ಪಕ್ಕದ ಧರೆಯೊಂದು ಸಡಿಲಗೊಂಡು ಮನೆ ಮೇಲೆ ಬಿದ್ದಿತ್ತು. ಇದರಿಂದ ಮನೆಯ ಗೋಡೆ ನೆಲಸಮವಾಗಿತ್ತು. ಕೊಠಡಿ ಮೇಲೆ ಬಿದ್ದ ಮಣ್ಣು ಬಿದ್ದ ತಕ್ಷಣ ಎಚ್ಚೆತ್ತ ಮಜೀದ್, ಇಬ್ಬರು ಮಕ್ಕಳನ್ನ ಪಾರು ಮಾಡಿದರು.
ನಗರಸಭೆ ಸಿಬ್ಬಂದಿ ಮತ್ತು ಸ್ಥಳೀಯರು ಕುಸಿದ ಮಣ್ಣು ಹಾಗೂ ಗೋಡೆಯನ್ನು ತೆರವುಗೊಳಿಸಿದರು. ಸ್ಥಳೀಯ ನಿವಾಸಿ ಗಣೇಶ್ ಆಚಾರ್ಯ ಸಹಿತ ಹಲವಾರು ಮಂದಿ ಮಣ್ಣು ತೆರವು ಕಾರ್ಯದಲ್ಲಿ ಸಹಕರಿಸಿದರು. ಘಟನಾ ಸ್ಥಳಕ್ಕೆ ನಗರಸಭಾ ಸದಸ್ಯರಾದ ಪಾತಿಮಾತ್ ಜೋರಾ, ಪಿ.ಜಿ. ಜಗನ್ನಿವಾಸ ರಾವ್, ಪೌರಾಯುಕ್ತ ಮಧು ಎಸ್. ಮನೋಹರ್, ಕಂದಾಯ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿಯಿಂದ ಗುರುವಾರ ಮುಂಜಾನೆವರೆಗೆ ಭಾರಿ ಮಳೆಯಾಗಿದೆ. ಅನೇಕ ಕಡೆ ಮಣ್ಣುಕುಸಿತ ಉಂಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.