ಬೆಳ್ತಂಗಡಿ: ತಾಲ್ಲೂಕಿನ ಚಾರ್ಮಾಡಿ, ನೆರಿಯ, ಮುಂಡಾಜೆ, ತೋಟತ್ತಾಡಿ, ಚಿಬಿದ್ರೆ, ಕಡಿರುದ್ಯಾವರ ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಉತ್ತಮ ಮಳೆ ಸುರಿದಿದೆ.
ಕಳೆದ ಹಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಬಳಲಿದ್ದ ಈ ಭಾಗದ ಜನರಿಗೆ ಮಳೆ ಕೊಂಚ ತಂಪನ್ನೆರೆಯಿತು. ಚಾರ್ಮಾಡಿ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಯಾದರೆ ನೆರಿಯ ಕಡೆ ಗಾಳಿ, ಗುಡುಗು ಸಹಿತ ಮಳೆ ಬಿದ್ದಿದೆ.
ಮುಂಡಾಜೆ ಗ್ರಾಮದ ನಿಡಿಗಲ್ -ಸೀಟು- ಸೋಮಂತಡ್ಕ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಾಗಿ ರಸ್ತೆಯನ್ನು ಸಂಪೂರ್ಣವಾಗಿ ಅಗೆದು ಹಾಕಲಾಗಿದ್ದು, ರಸ್ತೆ ಕೆಸರುಮಯ ಆಗಿದ್ದರಿಂದ ವಾಹನ ಸವಾರರು ಪರದಾಟ ನಡೆಸಿದರು.
ಅಂಬಡ್ತ್ಯಾರು ಬಳಿ ಮಣ್ಣಿನ ರಸ್ತೆಯಲ್ಲಿ ಜಾರಿದ ಟ್ಯಾಂಕರ್ನಿಂದಾಗಿ ಹಲವು ಸಮಯ ವಾಹನ ದಟ್ಟಣೆ ಉಂಟಾಗಿತ್ತು. ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿ ಚಲಾಯಿಸಿದ್ದರಿಂದ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗಿತ್ತು. ಹಲವು ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದರು. ಪಾದಾಚಾರಿಗಳಿಗೂ ರಸ್ತೆ ಬದಿ ನಡೆದಾಡಲು ತೊಂದರೆ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.