ಕಾಸರಗೋಡು: ಜಿಲ್ಲೆಯ ವಿವಿಧೆಡೆ ಗುರುವಾರ ಬಿರುಸಿನ ಮಳೆಯಾಗಿದ್ದು, ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ಜಲಾವೃತವಾಗಿದೆ.
ಇಡೀ ದಿನ ಮೋಡಕವಿದ ವಾತಾವರಣವಿದ್ದು, ಆಗಾಗ ಬಿಡುಸಿನ ಮಳೆ ಆಗಿದೆ. ಮಧೂರಿನ ಮಧುವಾಹಿನ ನದಿ ಉಕ್ಕಿ ಹರಿದು ದೇವಾಲಯ ಜಲಾವೃತವಾಗಿದ್ದು, ಗುರುವಾರ ನಸುಕಿನಿಂದಲೇ ದೈನಂದಿನ ಚಟುವಟಿಕೆಗಳಿಗೆ ತೊಡಕಾಗಿತ್ತು. ಈ ಪ್ರದೇಶದ ತಗ್ಗು ಪ್ರದೇಶದಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಸಂಕಷ್ಟದಲ್ಲಿ ಇರುವವರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಸಿರಿಬಾಗಿಲು, ಪಟ್ಲ, ಮೊಗರು, ಪೊಯ್ಯವಳಪ್, ಬೀಯಾರಂ ಪ್ರದೇಶವೂ ಜಲಾವೃತಗೊಂಡಿದೆ.
ಕುಂಬಳೆ ರೈಲುನಿಲ್ದಾಣದ ಅಂಡರ್ಪಾಸ್ ಜಲಾವೃತವಾಗಿದೆ. ಬತ್ತೇರಿ, ಕೊಯಿಪ್ಪಾಡಿ ಕರಾವಳಿ ನಿವಾಸಿಗಳು ಸಂಪರ್ಕ ಕಡಿದುಕೊಂಡಿದ್ದಾರೆ. ಮೊಗ್ರಾಲ್ ನಾಂಗಿ ಕರಾವಳಿ ರಸ್ತೆಯಲ್ಲೂ ನೆರೆ ಬಂದಿದ್ದು, ವಿವಿಧೆಡೆ ಕಡಲ್ಕೊರೆತ ತೀವ್ರವಾಗಿದೆ.
ಜಿಲ್ಲೆಯ ಮಲೆನಾಡು ಪ್ರದೇಶವಾದ ಕೊಟ್ಟೋಡಿ ಪೇಟೆ ಜಲಾವೃತವಾಗಿದೆ. ಕೊಟ್ಟೋಡಿ ನದಿ ಸಹಿತ ಜಲಾಶಯಗಳು ಉಕ್ಕಿ ಹರಿದಿವೆ. ಮನೆ, ದೇವಾಲಯ ಮತ್ತು ಮಳಿಗೆಗಳಿಗೆ ನೀರು ನುಗ್ಗಿದೆ. ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಿದ್ಯುತ್ ವ್ಯತ್ಯಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.