ಮೂಲ್ಕಿ: ತಾಲ್ಲೂಕಿನ ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳುವೈಲು ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಬೀಸಿದ ಭಾರಿ ಗಾಳಿಗೆ ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರ, ವಿದ್ಯುತ್ ಕಂಬಗಳು ರಸ್ತೆಗುರುಳಿವೆ.
ರಭಸದ ಗಾಳಿಗೆ ಮಾರುತಿ ರೈಸ್ ಮಿಲ್ಲಿನ ರಸ್ತೆ ಬದಿಯ ಖಾಸಗಿ ತೋಟದಲ್ಲಿದ್ದ ತೆಂಗಿನ ಮರಗಳು ಉರುಳಿ, ಪಕ್ಕದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಯ ಮೇಲೆ ಬಿದ್ದುದರಿಂದ ಸುಮಾರು ಐದು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ನಾಲ್ಕು ವಿದ್ಯುತ್ ಕಂಬಗಳು ರಸ್ತೆಗೆ ವಾಲಿವೆ. ಕಂಬದಲ್ಲಿದ್ದ ವಿದ್ಯುತ್ ತಂತಿಗಳು ಕಾಂಕ್ರೀಟ್ ರಸ್ತೆಯಲ್ಲಿ ಬಿದ್ದಿವೆ.
ಬೈಕ್ ಸವಾರರೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ವಿದ್ಯುತ್ ಕಂಬ ಮತ್ತು ತೆಂಗಿನ ಮರಗಳು ನೆಲಕ್ಕುರುಳಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯ ವಿನೋದ್ಕುಮಾರ್ ಕೊಳುವೈಲು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಮೆಸ್ಕಾಂ ಸಿಬಂದಿಗೆ ಮಾಹಿತಿ ನೀಡಿದರು. ಸ್ಥಳೀಯ ಯುವಕರ ಸಹಾರದಿಂದ ಮೆಸ್ಕಾಂ ಸಿಬ್ಬಂದಿ ಮುರಿದ ವಿದ್ಯುತ್ ಕಂಬ ಹಾಗೂ ತೆಂಗಿನ ಮರಗಳ ತೆರವು ಕಾರ್ಯ ನಡೆಸಿದರು. ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ಕಂಬಗಳ ಮರುಜೋಡಣೆ ಕಾರ್ಯ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.