ಪುತ್ತೂರು: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಹಾಕಿದ್ದ ಸೂಚನಾ ಫಲಕವೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾದ ಕಾರಣ, ಈ ಫಲಕವನ್ನು ಆಸ್ಪತ್ರೆ ಆಡಳಿತ ತೆರವುಗೊಳಿಸಿದೆ.
ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಬಾಗಿಲಿಗೆ ‘ಬುರ್ಖಾ ತೆಗೆದು ಒಳಬನ್ನಿ’ ಎಂದು ಫಲಕ ಹಾಕಲಾಗಿತ್ತು. ವರ್ಷದ ಹಿಂದೆಯೇ ಅಳವಡಿಸಿದ್ದ ಈ ಫಲಕದ ಚಿತ್ರವು ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಪುತ್ತೂರಿನ ಶಾಸಕ ಅಶೋಕ್ ರೈ ಅವರು ಇರುವ ವಾಟ್ಸ್ಆ್ಯಪ್ ಗ್ರೂಪ್ವೊಂದರಲ್ಲೂ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಶಾಸಕರು, ಫಲಕವನ್ನು ತೆಗೆಯುವಂತೆ ಸಿಬ್ಬಂದಿಗೆ ಸೂಚಿಸಿದ್ದ ಕಾರಣ ಇದನ್ನು ತೆರವುಗೊಳಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಯುವ ಕಾಂಗ್ರೆಸ್ ಪುತ್ತೂರು ನಗರ ಘಟಕದ ಅಧ್ಯಕ್ಷ ಮೋನು ಬಪ್ಪಳಿಗೆ ಅವರು, ‘ಇಸಿಜಿ ಮಾಡುವ ಕೊಠಡಿಯ ಎದುರು ಈ ಫಲಕ ಹಾಕಲಾಗಿತ್ತು. ಮುಸ್ಲಿಂ ಸಮುದಾಯಕ್ಕೆ ಸೇರಿದ ವೈದ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ಹಿಜಾಬ್ ಧರಿಸಿ ಕೆಲಸ ಮಾಡುತ್ತಾರೆ. ಇಸಿಜಿ ವೇಳೆ ಬುರ್ಖಾ ತೆಗೆಯುವುದು ಅನಿವಾರ್ಯವಾಗುತ್ತದೆ. ಹೀಗಾಗಿ ಅಳವಡಿಸಿರುವ ಫಲಕವೇ ಇದು ವಿನಾ ಇಲ್ಲಿ ಯಾವುದೇ ಕೋಮು ಭಾವನೆ ಇಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.