ADVERTISEMENT

ಖಾಸಗಿ ವಿಮಾ ಕಂಪನಿಗಳಿಂದ ಜನ ಸಾಮಾನ್ಯರಿಗೆ ಅನ್ಯಾಯ: ಹರ್ಷ ಡಿಸೋಜ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 13:57 IST
Last Updated 2 ಮಾರ್ಚ್ 2024, 13:57 IST

ಬೆಳ್ತಂಗಡಿ: ‘ಅಪಘಾತಕ್ಕೀಡಾದ ವಾಹನಗಳಿಗೆ ಖಾಸಗಿ ವಿಮಾ ಕಂಪೆನಿಯವರು ವಿಮೆ ಪರಿಹಾರ ನೀಡುವಾಗ ಕಾನೂನು ಉಲ್ಲಂಘಿಸುತ್ತಾರೆ. ಮೌಲ್ಯಮಾಪನವನ್ನು ತಮ್ಮ ಸಿಬ್ಬಂದಿ ಹಾಗೂ ಗುತ್ತಿಗೆಯವರು ಮಾಡುವಾಗ ಕಂಪನಿಯ ಹಿತ ಕಾಪಾಡಲು ಕಡಿಮೆ ಪರಿಹಾರ ನೀಡುವಂತೆ ವರದಿಯಲ್ಲಿ ಶಿಫಾರಸು ಮಾಡುತ್ತಾರೆ. ಇದರಿಂದ ಜನ ಸಾಮಾನ್ಯರಿಗೆ ಅನ್ಯಾಯವಾಗುತ್ತದೆ’ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಇನ್ಶೂರೆನ್ಸ್‌ ಸರ್ವೇಯರ್ಸ್ ಆ್ಯಂಡ್‌ ಲಾಸ್ ಅಸೆಸ್ಸರ್ಸ್ (ಇಸ್ಲಾ) ಮಂಗಳೂರು ಘಟಕದ ಸಂಯೋಜಕ ಹರ್ಷ ಡಿಸೋಜ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘‌‌ವಾಹನಕ್ಕೆ ಹಾನಿಯಾದ ಸಂದರ್ಭದಲ್ಲಿ ಪರಿಹಾರಕ್ಕೆ ಸಲ್ಲಿಸಿದ ಅರ್ಜಿಯ ಮೌಲ್ಯ ಮಾಪನ ಮಾಡಲಾಗುತ್ತದೆ. ಈ ಅಂದಾಜು ನಷ್ಟದ ಮೊತ್ತ ₹ 50 ಸಾವಿರ ಮೀರಿದರೆ ವಾಹನದ ಅಪಘಾತಕ್ಕೆ ಸಂಬಂಧಿಸಿ ಪರಿವೀಕ್ಷಣೆಯನ್ನು ಕೇಂದ್ರ ಸರ್ಕಾರದ ಪರವಾನಗಿ ಇರುವ ಸರ್ವೆಯರ್‌ ಮಾಡಬೇಕೆಂಬ ಕಾನೂನು ಇದೆ. ಇದನ್ನು ಎಲ್ಲಾ ವಿಮಾ ಕಂಪನಿಯವರು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಅವರು ಹೇಳಿದರು.

ಹಿರಿಯ ಸರ್ವೇಯರ್ ಪ್ರವೀಣ್ ಕುಮಾರ್ ಕಾಮತ್ ಮಾತನಾಡಿ, ‘ಈ ಕಾನೂನನ್ನು ಹೆಚ್ಚಿನ ಖಾಸಗಿ ವಿಮಾ ಕಂಪನಿಯವರು ಉಲ್ಲಂಘಿಸುತ್ತಾರೆ. ಇಂಥ ಉಲ್ಲಂಘನೆ ಕಂಡು ಬಂದರೆ ಸಂಸ್ಥೆಯ ಪದಾಧಿಕಾರಿಗಳನ್ನು ಸಂಪರ್ಕಿಸಿದರೆ ನ್ಯಾಯ ಒದಗಿಸಲು ಸಹಾಯ ಮಾಡುತ್ತೇವೆ. ಬೆಳ್ತಂಗಡಿ ತಾಲ್ಲೂಕಿನವರು ಇಸ್ಲಾದ ಬೆಳ್ತಂಗಡಿ ತಾಲ್ಲೂಕು ಸಂಘಟಕ ವಿಷ್ಣು ಮರಾಠೆ (9448549375) ಅವರಿಗೆ ಮಾಹಿತಿ ನೀಡಬಹುದು’ ಎಂದು ತಿಳಿಸಿದರು.

ADVERTISEMENT

ಸವೇ೯ಯರ್ ವಿಷ್ಣು ಮರಾಠೆ, ರಾಜ್ಯ ಘಟಕದ ದೇವದಾಸ್ ಆಳ್ವ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.