ADVERTISEMENT

ಇಖ್ವಾ ಸಂಸ್ಥೆಯ ಕಚೇರಿ ಉದ್ಘಾಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 3:22 IST
Last Updated 13 ಜೂನ್ 2024, 3:22 IST
ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ರಹೀಂ ಸುಲ್ತಾನ್‌ ಮಾತನಾಡಿದರು. ರಿಯಾಜ್‌ ಕಲ್ಲಾಜೆ, ಜೈನುಲ್ ಅಕ್ಬರ್‌ ಕಡೇಶಿವಾಲಯ, ರಶೀದ್ ನೀರಪಾದೆ ಹಾಗೂ ನವಾಜ್‌ ನೇರಳಕಟ್ಟೆ ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ರಹೀಂ ಸುಲ್ತಾನ್‌ ಮಾತನಾಡಿದರು. ರಿಯಾಜ್‌ ಕಲ್ಲಾಜೆ, ಜೈನುಲ್ ಅಕ್ಬರ್‌ ಕಡೇಶಿವಾಲಯ, ರಶೀದ್ ನೀರಪಾದೆ ಹಾಗೂ ನವಾಜ್‌ ನೇರಳಕಟ್ಟೆ ಭಾಗವಹಿಸಿದ್ದರು   

ಮಂಗಳೂರು: ಸೋಶಿಯಲ್ ಇಖ್ವಾ ಫೆಡರೇಶನ್‌ನ ‘ಇಖ್ವಾ ಶಿಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ’ದ ಕಚೇರಿಯನ್ನು ಬಂಟ್ವಾಳ ತಾಲ್ಲೂಕಿನ ಸೂರಿಕುಮೇರುವಿನಲ್ಲಿ ಆರಂಭಿಸಲಾಗುತ್ತಿದೆ. ಇದರ ಉದ್ಘಾಟನಾ ಸಮಾರಂಭವು ಮಾಣಿಯ ಇಂಡಿಯನ್ ಆಡಿಟೋರಿಯಂನಲ್ಲಿ ಇದೇ 14ರಂದು ಸಂಜೆ 7ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹೀಂ ಸುಲ್ತಾನ್ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಕಣಚೂರ್ ಶಿಕ್ಷಣ ಸಂಸ್ಥೆಯ ಕುಲಪತಿ ಯು.ಕೆ. ಮೋನು,  ಪತ್ರಕರ್ತ ಬದ್ರುದ್ದೀನ್ ಮಾಣಿ, ವಕೀಲ ಮುಝಫರ್ ಅಹಮದ್, ಮಂಗಳೂರಿನ ಎಸಿಪಿ ನಜ್ಮಾ ಫಾರೂಕಿ, ಬರಾಕಾ ಇಂಟರ್ ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷ ಮಹಮ್ಮದ್ ಅಶ್ರಫ್ ಭಾಗವಹಿಸಲಿದ್ದಾರೆ‘ ಎಂದರು.

ಸಂಸ್ಥೆಯ  ಪ್ರಧಾನ ಕಾರ್ಯದರ್ಶಿ ಜೈನುಲ್ ‌ಅಕ್ಬರ್ ಕಡೇಶಿವಾಲಯ, ‘ಮುಸ್ಲಿಂ ಸಮುದಾಯವು  ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಅಧ್ಯಯನ ನಡೆಸುತ್ತಿರುವ ನಮ್ಮ ಸಂಸ್ಥೆಯು ಸಮುದಾಯ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿ.ಯು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಒದಗಿಸುತ್ತಿದೆ. ಅರ್ಧದಲ್ಲಿ ಶಿಕ್ಷಣ ಮೊಟಕುಗೊಳಿಸಿರುವ ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ಅವರು ಶಿಕ್ಷಣ ಮುಂದುವರಿಸಲು ನೆರವಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗೂ ವಿದ್ಯಾರ್ಥಿಗಳನ್ನು ಅಣಿಗೊಳಿಸುತ್ತಿದೆ’ ಎಂದರು.

ADVERTISEMENT

‘ಸದ್ಯಕ್ಕೆ ನಮ್ಮ ಸಂಸ್ಥೆಯು ನೆಟ್ಲಮುಡ್ನೂರು, ಮಾಣಿ, ಅನಂತಾಡಿ, ಕೆದಿಲ, ಪೆರಾಜೆ, ಕಡೇಶಿವಾಲಯ, ಬಾಳ್ತಿಲ, ಬರಿಮಾರು ಮತ್ತು ಇಡ್ಕಿದು ಗ್ರಾಮಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಡ ಮತ್ತು ಅಶಕ್ತ ರೋಗಿಗಳಿಗೆ ಉಚಿತ ಆಂಬುಲೆನ್ಸ್  ಸೇವೆಯನ್ನು ಒದಗಿಸುತ್ತಿದೆ. ಇನ್ನೊಂದು ಹೊಸ ಆಂಬುಲೆನ್ಸ್ ಅನ್ನು ಶೀಘ್ರವೇ ವ್ಯವಸ್ಥೆಗೊಳಿಸಲಿದ್ದೇವೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಖಜಾಂಚಿ ರಿಯಾಜ್ ಕಲ್ಲಾಜೆ, ಕಾರ್ಯದರ್ಶಿ ರಶೀದ್ ನೀರಪಾದೆ, ಕಾರ್ಯಕಾರಿ ಸಮಿತಿ ಸದಸ್ಯ ನವಾಜ್ ನೇರಳಕಟ್ಟೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.