ADVERTISEMENT

ಆಟೊಗಳಿಗೆ ಜಿಲ್ಲೆಗೆ ಒಂದೇ ಪರವಾನಗಿ: ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 8:01 IST
Last Updated 6 ಮಾರ್ಚ್ 2024, 8:01 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೊರಿಕ್ಷಾಗಳಿಗೆ ಒಂದೇ ರೀತಿಯ ಪರವಾನಗಿ ನೀಡಬೇಕು ಎಂದು ಆಟೊ ರಾಜಕನ್ಮಾರ್ ಯೂನಿಯನ್‌ ಒತ್ತಾಯಿಸಿದೆ.

ಇಲ್ಲಿ ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್, ‘ಗ್ರಾಮೀಣ ರಿಕ್ಷಾಗಳು ನಗರಕ್ಕೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಅಪ್ಪಿ ತಪ್ಪಿ ಪ್ರವೇಶಿಸಿದರೆ ಭಾರಿ ದಂಡ ವಿಧಿಸಲಾಗುತ್ತಿದೆ. ಇತ್ತೀಚೆಗೆ ರೋಗಿಯನ್ನು ಕರೆದುಕೊಂಡು ನಗರಕ್ಕ ಬಂದ ಆಟೊ ಚಾಲಕರೊಬ್ಬರಿಗೆ ₹ 5 ಸಾವಿರ ದಂಡ ವಿಧಿಸಿದ್ದಾರೆ. ಇಷ್ಟೊಂದು ದಂಡ ತೆತ್ತು ರಿಕ್ಷಾ ಚಾಲಕರು ಬದುಕಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

‘ಆಟೊರಿಕ್ಷಾಗಳಿಗೆ ಜಿಲ್ಲೆಯಲ್ಲಿ ಒಂದೇ ರೀತಿಯ ಪರವಾನಗಿ ವ್ಯವಸ್ಥೆ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ನಮ್ಮ ಈ ಬೇಡಿಕೆ ಈಡೇರದಿದ್ದರೆ  ಗ್ರಾಮೀಣ ಪ್ರದೇಶದ ರಿಕ್ಷಾ ಚಾಲಕರ ಸಂಘಟನೆಗಳು ಒಗ್ಗಟ್ಟಾಗಿ ಜಿಲ್ಲಾಧಿಕಾರಿ ಕಚೇರಿಗೆ ನಡಿಗೆ ಹಮ್ಮಿಕೊಂಡು ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಎಚ್ಚರಿಸಿದರು.

ADVERTISEMENT

‘ಆಯಾ ಪ್ರದೇಶದ ಆಟೋಚಾಲಕರಿಗೆ ಆಯಾ ಪ್ರದೇಶದಲ್ಲಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಖು. ನಿಲುಗಡೆ ಸ್ಥಳದ ಬಗ್ಗೆ ಪರವಾನಗಿಯಲ್ಲೇ ನಮೂದಿಸಬೇಕು. ಮುಖ್ಯ ರಸ್ತೆಗಳ ಪಕ್ಕದಲ್ಲಿ ಪ್ರತಿ 10 ಕಿ.ಮೀಗೆ ಒಂದದಾದರೂ ಎಲ್‌ಪಿಜಿ ಮತ್ತು ಸಿಎನ್‌ಐ ಪಂಪಿಂಗ್‌ ಸ್ಟೇಷನ್‌ ವ್ಯವಸ್ಥೆ ಕಲ್ಪಿಸಬೇಕು. ರಿಕ್ಷಾ ಚಾಲಕರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಬೇಕು. ಜಿಲ್ಲಾ ಮತ್ತು ರಾಜ್ಯದ ಗಡಿ ದಾಟಿ 10 ಕಿ.ಮೀ. ವರೆಗೂ ಸಂಚಾರಿಸಲು ಅವಕಾಶ ಕಲ್ಪಿಸಬೇಕು. ನಮಗೂ ಇಎಸ್‌ಐ, ಪಿಎಫ್, ನಿವೃತ್ತಿ ವೇತನ ಸೌಲಭ್ಯ ಕಲ್ಪಿಸಬೇಕು’ ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಯೂನಿಯನ್‌ನ  ಸಿದ್ದಿಕ್‌ ಮುಡಿಪು, ಪ್ರಸಾದ್ ಕುರ್ನಾಡು,  ಕಿರಣ್ ಕುಮಾರ್, ಶಮೀರ್, ಉಸ್ಮಾನ್ ಮೋಂಟೆಪದವು, ಉಸ್ಮಾನ್ ಸಜಿಪ, ಶಫೀಕ್, ರಜಾಕ್ ಭಾಗವಹಿಸಿದ್ದರು. .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.