ADVERTISEMENT

ದಕ್ಷಿಣ ಕನ್ನಡ: ಎರಡಂಕಿಗೆ ಇಳಿದ ಮಲೇರಿಯ

ದ.ಕ: ಸಂಘಟಿತ ಪ್ರಯತ್ನಕ್ಕೆ ದಕ್ಕಿದ ಯಶಸ್ಸು

ಪ್ರವೀಣ್‌ ಕುಮಾರ್‌ ಪಿ.ವಿ
Published 20 ಜೂನ್ 2024, 7:49 IST
Last Updated 20 ಜೂನ್ 2024, 7:49 IST
 ಡಾ.ಎಚ್.ಆರ್.ತಿಮ್ಮಯ್ಯ 
 ಡಾ.ಎಚ್.ಆರ್.ತಿಮ್ಮಯ್ಯ    

ಮಂಗಳೂರು: ಮುಂಗಾರು ದಾಂಗುಡಿ ಇಡುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಶಕಗಳ ಹಿಂದೆ ಮಲೇರಿಯ ಪ್ರಕರಣಗಳು ಏಕಾಏಕಿ ತಾರಕಕ್ಕೆ ಏರುತ್ತಿದ್ದವು. ಆದರೆ, ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಅದರಲ್ಲೂ ನಗರಲ್ಲಿ ಮಲೇರಿಯ ಬಹುತೇಕ ಹತೋಟಿಗೆ ಬಂದಿದೆ. ದಶಕಗಳ ಹಿಂದೆ 6 ಸಾವಿರದ ಗಡಿ ದಾಟುತ್ತಿದ್ದ ಮಲೇರಿಯಾ ಪ್ರಕರಣಗಳ ಸಂಖ್ಯೆ ಕಳೆದೆರಡು ವರ್ಷಗಳಲ್ಲಿ ಎರಡಂಕಿಗೆ ಇಳಿದಿದೆ.

2024ರಲ್ಲಿ ಜೂನ್‌ವರೆಗೆ ಜಿಲ್ಲೆಯಲ್ಲಿ 25 ಮಲೇರಿಯಾ ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಮಲೇರಿಯ ಪ್ರಕರಣ ಪ್ರದೇಶಗಳಲ್ಲಿ ಸತತ ನಿಗಾ, ರೋಗಿಗಳಿಗೆ ತ್ವರಿತ ಚಿಕಿತ್ಸೆ, ನಿರಂತರ ಜನಜಾಗೃತಿ ಮೂಡಿಸುವ ಸಂಘಟಿತ ಪ್ರಯತ್ನವೇ ಈ ರೋಗ ನಿಯಂತ್ರಣಕ್ಕೆ ಕಾರಣ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು.

'ಹಿಂದೆಲ್ಲ ಮಳೆ ಶುರುವಾಗುತ್ತಿದ್ದಂತೆಯೇ ಮಲೇರಿಯ ಸಂಖ್ಯೆ ಒಂದೇ ಸಮನೆ ಹೆಚ್ಚಳವಾಗುತ್ತಿತ್ತು. ಮೇ, ಜೂನ್‌ ತಿಂಗಳುಗಳಲ್ಲಿ ಮಲೇರಿಯ ನಿಯಂತ್ರಣ ತಲೆನೋವಾಗಿ ಪರಿಣಮಿಸುತ್ತಿತ್ತು. ಆದರೆ 2023ರಿಂದ ಮಲೇರಿಯ ಪ್ರಕರಣಗಳ ಸಂಖ್ಯೆ 100ರ ಗಡಿ ದಾಟಿಲ್ಲ’ ಎನ್ನುತ್ತಾರೆ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನಚಂದ್ರ.

ADVERTISEMENT

‘ನಗರದಲ್ಲಿ ರಕ್ತ ಪರೀಕ್ಷೆ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿದ್ದು, ರೋಗಿಯು  ಔಷಧಿಯನ್ನು ಪೂರ್ಣ ಪ್ರಮಾಣದಲ್ಲಿ ಸೇವಿಸುವಂತೆ  ಜಾಗೃತಿ ಮೂಡಿಸಿದ್ದು ಈ ರೋಗ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ರೋಗ ಹತೋಟಿಯ ಹಿಂದೆ ಸಂಘಟಿತ ಪ್ರಯತ್ನವಿದೆ. ಇಲಾಖೆಯ ಜೊತೆಗೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಾಲಿಕೆ, ಪ್ರಯೋಗಾಲಯಗಳ ಪಾತ್ರವೂ ಇದೆ. ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸುವ ಮೂಲಕ ಜನರೂ ಕೈಜೋಡಿಸಿದ್ದಾರೆ’ ಎಂದು ಅವರು ತಿಳಿಸಿದರು.

‘ಮಲೇರಿಯ ಹರಡಲು ಪ್ರಮುಖ ಕಾರಣ ರೋಗವಿರುವ ವ್ಯಕ್ತಿಯುಸಕಾಲದಲ್ಲಿ ಚಿಕಿತ್ಸೆ ಪಡೆಯದೇ ಇರುತ್ತಿದ್ದುದು. ಜ್ವರ ಬಂದಾಗ  ರಕ್ತ ಪರೀಕ್ಷೆ ಮಾಡಿಸಿಕೊಳ್ಳದೇ, ಮಾತ್ರೆ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ. ಆದರೆ, ಆ ವ್ಯಕ್ತಿಯಿಂದ ಅನೇಕರಿಗೆ ರೋಗ ಹರಡುತ್ತದೆ.  ಜ್ವರ ಬಂದ ತಕ್ಷಣವೇ  ರಕ್ತ ಪರೀಕ್ಷೆ ಮಾಡಿಸಿಕೊಂಡರೆ ಆ ಪ್ರದೇಶದಲ್ಲಿ ರೋಗ ಹರಡದಂತೆ  ಮುನ್ನೆಚ್ಚರಿಕೆ ವಹಿಸುವುದು ಸುಲಭ’ ಎಂದು ಅವರು ವಿವರಿಸಿದರು.

‘ಹಿಂದೆಲ್ಲ ರಕ್ತ ಪರೀಕ್ಷೆಯ ಫಲಿತಾಂಶಕ್ಕೆ ದಿನಗಟ್ಟಲೆ ಕಾಯಬೇಕಾಗುತ್ತಿತ್ತು. ಈಗ  ರ‍್ಯಾಪಿಡ್‌ ಟೆಸ್ಟಿಂಗ್‌ನಿಂದ 15 ನಿಮಿಷದಲ್ಲಿ ಫಲಿತಾಂಶ ತಿಳಿಯುತ್ತದೆ. ಬಳಿಕ ರಕ್ತದ ಲೇಪನದ ಪರೀಕ್ಷೆ   ಮೂಲಕ ರೋಗವು ಯಾವ ಹಂತದಲ್ಲಿದೆ ಎಂದು ತಿಳಿದುಕೊಳ್ಳಬಹುದು. ದಶಕಗಳ ಹಿಂದೆ ರಕ್ತ ತಪಾಸಣೆ ಮಾಡಿಸಲು ನಗರದಲ್ಲಿ 15ರಿಂದ 20 ಪ್ರಯೋಗಾಲಯಗಳಷ್ಟೇ ಇದ್ದವು.  ಈಗ 84ಕ್ಕೂ ಹೆಚ್ಚು ಪ್ರಯೋಗಾಲಯಗಳಿವೆ. ರಕ್ತದ ಲೇಪನದ ಪರೀಕ್ಷೆ ಫಲಿತಾಂಶವನ್ನೂ ಒಂದೆರಡು ತಾಸುಗಳಲ್ಲೇ ಪಡೆಯಲು ಸಾಧ್ಯವಿದೆ. ರೋಗ ನಿಯಂತ್ರಣದಲ್ಲಿ ಇದು ಕೂಡಾ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದರು.

‘ನಗರದಲ್ಲಿ ಮಲೇರಿಯ ನಿಯಂತ್ರಣಕ್ಕೆಂದೇ ಪ್ರತ್ಯೇಕ ಘಟಕವಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಅದಕ್ಕೆ ಕರೆ ಮಾಡಿದರೆ ಕಾರ್ಯಕರ್ತರು ಮನೆಗೆ ಬಂದು ರಕ್ತಪರೀಕ್ಷೆ ಮಾಡಿ  ಫಲಿತಾಂಶ ತಿಳಿಸುತ್ತಾರೆ.  ಮಲೇರಿಯ ಕಂಡುಬಂದರೆ ನಿಯಂತ್ರಣ ಕ್ರಮಗಳ ಬಗ್ಗೆ ಸಲಹೆ ನೀಡುತ್ತಾರೆ.  2019ರಿಂದ ನಗರ ಎಲ್ಲ ವೈದ್ಯಕೀಯ ಪ್ರಯೋಗಾಲಯಗಳೂ ಮಲೇರಿಯ ಪತ್ತೆಯಾದ ತಕ್ಷಣ ರೋಗಿಯ ಹೆಸರು, ಸಂಪರ್ಕ ಸಂಖ್ಯೆ ಹಾಗೂ ವಿಳಾಸ‌ವನ್ನು ನಮ್ಮ ಜೊತೆ ಹಂಚಿಕೊಳ್ಳುತ್ತಾರೆ. ಆ ಪ್ರದೇಶದಲ್ಲಿ ರೋಗ ನಿಯಂತ್ರಣ ಕ್ರಮ ಕೈಗೊಳ್ಳಲು ಇದು ನೆರವಾಗುತ್ತದೆ’ ಎಂದು ಅವರು ವಿವರಿಸಿದರು.

ಮಲೇರಿಯ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಇಲಾಖೆ ನಡೆಸಿದ ಪ್ರಯತ್ನಗಳು ಯಶಸ್ಸು ಕಂಡಿವೆ. ಭವಿಷ್ಯದಲ್ಲೂ ಮಲೇರಿಯ ಹೆಚ್ಚದಂತೆ ತಡೆಯಲು ಜನರ ಸಹಕಾರ ಮುಖ್ಯ.
-ಡಾ.ಎಚ್‌.ಆರ್‌.ತಿಮ್ಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಸೊಳ್ಳೆ ಇನ್ನೂ ಇದೆ!

ನಗರದಲ್ಲಿ ಮಲೇರಿಯ ಪ್ರಮಾಣ ಕಡಿಮೆಯಾಗಿರಬಹುದು. ಆದರೆ ಅದನ್ನು ಹರಡುವ ಅನಾಫಿಲಿಸ್‌ ಸೊಳ್ಳೆಗಳ ನಿಯಂತ್ರಣ ಇನ್ನೂ ಸಾಧ್ಯವಾಗಿಲ್ಲ. ತುಸು ಅಸಡ್ಡೆ ತೋರಿದರೂ ಈ ರೋಗ ಮತ್ತೆ ಹೆಚ್ಚಳವಾಗುವ ಅಪಾಯವಿದೆ ಎಂದು ಎಚ್ಚರಿಸುತ್ತಾರೆ ಡಾ.ನವೀನಚಂದ್ರ. ‘ಸದ್ಯ ಮಲೇರಿಯ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಉತ್ತರ ಭಾರತದಿಂದ ಬಂದಿರುವ ವಲಸೆ ಕಾರ್ಮಿಕರಲ್ಲಿ. ಅವರು ಜ್ವರ ಬಂದರೂ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ. ವೈದ್ಯರ ಸಲಹೆ ಪಡೆಯದೇ ಅವರೇ ಮಾತ್ರೆ ಸೇವಿಸುತ್ತಾರೆ. ಇದರಿಂದ ಜ್ವರ ಕಡಿಮೆಯಾದರೂ ಅವರ ಮೂಲಕ ಬೇರೆಯವರಿಗೆ ಈ ಕಾಯಿಲೆ ಹರಡುವ ಅಪಾಯವಿದೆ’ ಎಂದು ಅವರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.