ಮಂಗಳೂರು: ನಗರದ ಹೋಟೆಲ್ ಒಂದರಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಉಡುಪಿಯ ಕುಂಜಿಬೆಟ್ಟು ಸಗ್ರಿಯ ಸಂತೋಷ್ ಸುವರ್ಣ (56) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಸಂತೋಷ್ ಅವರು ಆರು ತಿಂಗಳಿನಿಂದ ಮನೆಗೆ ಹೋಗುತ್ತಿರಲಿಲ್ಲ. ಆದರೆ ಪ್ರತಿ ದಿನ ಪತ್ನಿಗೆ ಕರೆ ಮಾಡಿ ಮಾತನಾಡುತ್ತಿದ್ದರು. ಸೆ. 4ರಂದು ರಾತ್ರಿ 10 ಗಂಟೆ ಸುಮಾರಿಗೆ ಪತ್ನಿ ಜೊತೆ ಮಾತನಾಡಿದ್ದರು. ಸೆ. 5ರ ಬಳಿಕ ಮನೆಯವರಿಗೆ ಕರೆ ಮಾಡಿರಲಿಲ್ಲ. ಆದರೆ ಅವರ ನಿಕಟ ಸಂಬಂಧಿಯೊಬ್ಬರಿಗೆ ರಿಜಿಸ್ಟರ್ಡ್ ಪೋಸ್ಟ್ ಕಳುಹಿಸಿದ್ದರು. ಅದರಲ್ಲಿ ತಾವು ಸಾಲ ಮಾಡಿ. ಇಕ್ಕಟ್ಟಿನಲ್ಲಿ ಸಿಲುಕಿದ್ದ ವಿವರ ತಿಳಿಸಿದ್ದರು.’
‘ಉಡುಪಿಯ ವಕೀಲರೊಬ್ಬರು ₹ 21 ಲಕ್ಷದ ಮೊತ್ತದ ಚೆಕ್ ಪಡೆದುಕೊಂಡು, ಅದು ಬೌನ್ಸ್ ಆಗುವಂತೆ ಮಾಡಿ, ನನಗೆ ನೋಟಿಸ್ ನೀಡಿದ್ದಾರೆ. ನನಗೆ ಹೆಂಗಸಿನ ಜೊತೆ ಸಂಬಂಧ ಕಟ್ಟಿ ಮಾನಹಾನಿ ಮಾಡಿದ್ದಾರೆ. ಮಾನಸಿಕ ಹಿಂಸೆ ನೀಡಿರುವ ಅವರೇ ನನ್ನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ ಎಂದು ಸಂತೋಷ್ ಸುವರ್ಣ ಅವರು ರಿಜಿಸ್ಟರ್ಡ್ ಪತ್ರದಲ್ಲಿ ಉಲ್ಲೇಖಿಸಿದ್ದರು.’
‘ಆ ಪತ್ರ ಕೈ ಸೇರಿದ ಬಳಿಕ, ಪುತ್ರ ಈ ಹಿಂದೆ ಗೂಗಲ್ ಪೇ ಮೂಲಕ ಹಣ ಕಳುಹಿಸಿದ್ದ ನಂಬರ್ ಒಂದಕ್ಕೆ ಕರೆ ಮಾಡಿ ವಿಚಾರಿಸಿದ್ದರು. ಅದು ಹೋಟೆಲ್ ಸಿಬ್ಬಂದಿಯೊಬ್ಬರ ಸಂಖ್ಯೆಯಾಗಿತ್ತು. ತಂದೆ ಅದೇ ಹೋಟೆಲ್ನಲ್ಲಿ ಉಳಿದುಕೊಂಡಿದ್ದು ಗೊತ್ತಾಗಿತ್ತು. ತಂದೆ ಫೋನ್ ಕರೆ ಸ್ವೀಕರಿಸದ ವಿಚಾರವನ್ನು ಅವರು ಆ ಸಿಬ್ಬಂದಿಗೆ ತಿಳಿಸಿದ್ದರು. ಸಂತೋಷ್ ಸುವರ್ಣ ಉಳಿದುಕೊಂಡಿದ್ದ ಕೊಠಡಿಯನ್ನು ಸಿಬ್ಬಂದಿ ಪರಿಶೀಲಿಸಿದಾಗ ಅದಕ್ಕೆ ಒಳಗಿನಿಂದ ಬಾಗಿಲು ಹಾಕಲಾಗಿತ್ತು. ಪೊಲೀಸರನ್ನು ಕರೆಸಿ ಬಾಗಿಲು ಒಡೆದಾಗ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂದಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದರು.
ನಗರದ ಕದ್ರಿಯ ನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.