ADVERTISEMENT

ಮಂಗಳೂರು: ‘ಚಡ್ಡಿ ಗ್ಯಾಂಗ್‌’ನ ನಾಲ್ವರು ದರೋಡೆಕೋರರ ಬಂಧನ

ಕೃತ್ಯ ನಡೆದ 5 ಗಂಟೆಗಳಲ್ಲೇ ಮಧ್ಯಪ್ರದೇಶದ ತಂಡ ಪೊಲೀಸ್‌ ವಶಕ್ಕೆ‌, ಕೃತ್ಯಕ್ಕೆ ಬಳಸಿದ್ದ ಪರಿಕರಗಳ ವಶ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 16:17 IST
Last Updated 9 ಜುಲೈ 2024, 16:17 IST
ಆರೊಪಿಗಳಿಂದ ಪೊಲೀಸರು ವಶಪಡಿಸಿಕೊಂಡ, ಚಿನ್ನ ಮತ್ತು ವಜ್ರದ ಆಭರಣಗಳು, ಕೈಗಡಿಯಾರಗಳು, ನಗದು ಹಾಗೂ ಮೊಬೈಲ್‌ಗಳು
ಆರೊಪಿಗಳಿಂದ ಪೊಲೀಸರು ವಶಪಡಿಸಿಕೊಂಡ, ಚಿನ್ನ ಮತ್ತು ವಜ್ರದ ಆಭರಣಗಳು, ಕೈಗಡಿಯಾರಗಳು, ನಗದು ಹಾಗೂ ಮೊಬೈಲ್‌ಗಳು   

ಮಂಗಳೂರು: ನಗರದ ಉರ್ವ ಠಾಣೆಯ ವ್ಯಾಪ್ತಿಯ ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯ ಬಳಿಯ ಮನೆಯಲ್ಲಿ ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿ ನಗ–ನಗದು ದೋಚಿದ್ದ ನಾಲ್ವರು ಆರೋಪಿಗಳನ್ನು ಕೃತ್ಯ ನಡೆದ ಐದು ಗಂಟೆಗಳಲ್ಲೇ ಬಂಧಿಸಲಾಗಿದೆ. ನಗರ ಕಮಿಷನರೇಟ್‌ನ ಪೊಲೀಸರು ಮತ್ತು ಹಾಸನ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. 

‘ಆರೋಪಿಗಳಿಂದ ₹ 12 ಲಕ್ಷ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ₹ 3 ಸಾವಿರ ನಗದು, ಮೊಬೈಲ್‌, 10 ಬ್ರ್ಯಾಂಡೆಡ್ ಕೈಗಡಿಯಾರಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರೆಲ್ಲರೂ ಮಧ್ಯಪ್ರದೇಶದವರಾಗಿದ್ದು, ಕುಖ್ಯಾತ ‘ಚಡ್ಡಿ ಗ್ಯಾಂಗ್‌’ನ ಸದಸ್ಯರು. ಗುಣಾ ಜಿಲ್ಲೆಯ ರಗೋಗರ್ ತಾಲ್ಲೂಕಿನ ವಿಶ್ವನಗರದ ರಾಜು ಸಿಂಘಾನಿಯಾ (24 ವರ್ಷ),  ಕೋತ್ವಾಲಿಯ ಜಗನ್ಪುರ್ ಚಾಕ್‌ನ ವಿಕ್ಕಿ (21), ಭೋಪಾಲ್‌ನ ಗುಲಾಬ್‌ಗಂಜ್‌ನ ಮಯೂರ್ (30) ಹಾಗೂ ಅಶೋಕನಗರದ ಮಾಧವಗಢದ ಬಾಲಿ (22) ಬಂಧಿತರು’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅರ್ಗವಾಲ್‌ ಮಾಹಿತಿ ನೀಡಿದ್ದಾರೆ. 

ಕೋಟೆಕಣಿ ರಸ್ತೆಯ ಬಳಿಯ ಮನೆಯಲ್ಲಿ ವಿಕ್ಟರ್ ಮೆಂಡೋನ್ಸಾ– ಪ್ಯಾಟ್ರಿಸಿಯಾ ಮೆಂಡೋನ್ಸ ವೃದ್ಧ ದಂಪತಿ ವಾಸವಿದ್ದಾರೆ. ಬರ್ಮುಡಾ ಚಡ್ಡಿ ಮತ್ತು ಬನಿಯನ್ ಧರಿಸಿದ್ದ ದರೋಡೆಕೋರರ ತಂಡ (ಚಡ್ಡಿ ಗ್ಯಾಂಗ್‌) ಕಿಟಕಿಯ ಗ್ರಿಲ್ ಅನ್ನು ತುಂಡರಿಸಿ ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ಒಳ ಪ್ರವೇಶಿಸಿತ್ತು. ಮನೆಯಲ್ಲಿದ್ದ 3 ಮೊಬೈಲ್ ಫೋನ್ ಗಳನ್ನು ನೆಲಕ್ಕೆ ಬಡಿದು ಜಖಂಗೊಳಿಸಿತ್ತು. ವಿಕ್ಟರ್ ಮೆಂಡೋನ್ಸಾ ಅವರಿಗೆ ಕಬ್ಬಿಣದ ರಾಡಿನಿಂದ ಹಾಗೂ ಅವರ ಪತ್ನಿ ಪ್ಯಾಟ್ರಿಸಿಯಾ ಮೆಂಡೋನ್ಸ ಅವರಿಗೆ ಸ್ಕ್ರೂ ಡ್ರೈವರ್‌ನಿಂದ ಹೊಡೆದು ಹಲ್ಲೆ ನಡೆಸಿತ್ತು. ಮನೆಯಲ್ಲಿರುವ ಬೆಲೆಬಾಳುವ ಸ್ವತ್ತುಗಳನ್ನು ನೀಡಿದರೆ ನಿಮಗೇನು ಮಾಡುವುದಿಲ್ಲ ಎಂದು ಬೆದರಿಕೆ ಒಡ್ಡಿತ್ತು. ಬೊಬ್ಬೆ ಹಾಕದಂತೆ ಹಾಗೂ ಫೋನ್ ಮಾಡದಂತೆ ಬೆದರಿಸಿತ್ತು. ಹಲ್ಲೆಯಿಂದ ವೃದ್ಧ ದಂಪತಿ ಗಾಯಗೊಂಡಿದ್ದರು’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಕಪಾಟಿನ ಲಾಕರ್ ಒಳಗೆ ಇರಿಸಿದ್ದ ಚಿನ್ನ ಮತ್ತು ವಜ್ರದ ಆಭರಣಗಳು, ಸ್ಯಾಮ್ ಸಂಗ್ ಮೊಬೈಲ್ ಫೋನ್ ಮತ್ತು 10 ಬ್ರ್ಯಾಂಡೆಡ್ ಕೈಗಡಿಯಾರಗಳು ಹಾಗೂ ₹ 3 ಸಾವಿರ ನಗದನ್ನು ಸುಲಿಗೆ ಮಾಡಿತ್ತು. ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಪರಾರಿಯಾಗಿತ್ತು. ದಂಪತಿಯನ್ನು ಬೆದರಿಸಿ ಕಾರಿನ ಕೀಯನ್ನು ಆರೋಪಿಗಳು ಪಡೆದುಕೊಂಡಿದ್ದರು. ಕೃತ್ಯದ ಬಗ್ಗೆ ಪ್ಯಾಟ್ರ್ರಿಸಿಯಾ ಮೆಂಡೊನ್ಸಾ ಅವರು ಉರ್ವ ಠಾಣೆಗೆ ದೂರು ನೀಡಿದ್ದರು. ಕಳುವಾಗಿದ್ದ ಚಿನ್ನ ಮತ್ತು ವಜ್ರದ ಆಭರಣಗಳ ಮೌಲ್ಯ  ಸುಮಾರು ₹ 12 ಲಕ್ಷ, 10 ಬ್ರ್ಯಾಂಡೆಡ್ ಕೈಗಡಿಯಾರಗಳ ಮೌಲ್ಯ ₹ 1 ಲಕ್ಷ  ಆಗಬಹುದು ಎಂದು ಅಂದಾಜಿಸಲಾಗಿದೆ’ ಎಂದು ಅವರು ತಿಳಿಸಿದರು.

ಮಿಂಚಿನ ಕಾರ್ಯಾಚರಣೆ:

‘ದರೋಡೆ ನಡೆದ ಕೆಲವೇ ಹೊತ್ತಿನಲ್ಲಿ ವೃದ್ಧ ದಂಪತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಉರ್ವಾ ಠಾಣೆಯ ಇನ್‌ಸ್ಪೆಕ್ಟರ್ ಭಾರತಿ ಹಾಗೂ ಸಿಬ್ಬಂದಿಯವರು ತಕ್ಷಣ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಕೃತ್ಯದ ವಿವರ ಕಲೆ ಹಾಕಿದ್ದರು. ಆರೋಪಿಗಳು ಕಾರಿನೊಂದಿಗೆ ಪರಾರಿಯಾದ ಬಗ್ಗೆ ನಿಯಂತ್ರಣ ಕೊಠಡಿಗೂ ತಕ್ಷಣವೇ ಮಾಹಿತಿ ನೀಡಿದ್ದರು. ಕಳವಾದ ಕಾರು ಬಳಿಕ ಮೂಲ್ಕಿ ಬಸ್‌ ನಿಲ್ದಾಣದ ಸಮೀಪ ಪತ್ತೆಯಾಗಿತ್ತು. ಕಾರನ್ನು ವಶಕ್ಕೆ ಪಡೆದು ಸ್ಥಳದ ಆಸುಪಾಸಿನಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದ ದೃಶ್ಯಗಳನ್ನು ಪರಿಶೀಲಿಸಿದಾಗ, ಆರೋಪಿಗಳು ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡು ಬಂದಿತ್ತು’ ಎಂದು ಅವರು ವಿವರಿಸಿದರು.

‘ಮುಲ್ಕಿ ಕಡೆಯಿಂದ ಮಂಗಳೂರಿಗೆ ಬೆಳಗಿನ ಜಾವ ಬಂದ ಬಸ್‌ಗಳ ಮಾಹಿತಿಯನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಂದ ಪಡೆದಾಗ, ಮುಲ್ಕಿಯಿಂದ ನಾಲ್ವರು ಒಟ್ಟಿಗೆ ಮಂಗಳೂರಿಗೆ ಪ್ರಯಾಣಿಸಿದ್ದು ಗೊತ್ತಾಗಿತ್ತು. ನಿರ್ವಾಹಕರು ನೀಡಿದ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಆ ನಾಲ್ವರು ಬೆಂಗಳೂರಿಗೆ ಹೋಗುವ ಬಸ್ಸಿನಲ್ಲಿ ಪ್ರಯಾಣಿಸಿದ್ದು ತಿಳಿದುಬಂದಿತ್ತು. ಈ ಬಗ್ಗೆ  ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಅವರಿಗೆ ಮಾಹಿತಿ ನೀಡಲಾಗಿತ್ತು. ಅವರ ಸೂಚನೆ ಮೇರೆಗೆ ಸಕಲೇಶಪುರದ ಡಿವೈಎಸ್ಪಿ, ಸರ್ಕಲ್ ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ಸಕಲೇಶಪುರ ಸಮೀಪ ಸದರಿ ಬಸ್ಸನ್ನು ತಡೆದು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಕೃತ್ಯವೆಸಗಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದರು. ಕಳವು ಮಾಡಿದ್ದ ಚಿನ್ನ ಹಾಗೂ ವಜ್ರದ ಆಭರಣಗಳು, ಕೈಗಡಿಯಾರಗಳು ಹಾಗೂ ನಗದನ್ನು ಆರೋಪಿಗಳಿಂದ ಹಾಸನ ಪೊಲೀಸರು ವಶಪಡಿಸಿಕೊಂಡಿದ್ದು, ಅವುಗಳನ್ನು ಉರ್ವಾ ಠಾಣೆಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ‘ ಎಂದರು.

‘ಕಮಿಷನರ್‌ ಅನುಪಮ್ ಅಗರ್ವಾಲ್‌, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ್ ಗೋಯಲ್ ಹಾಗೂ ಅಪರಾಧ ವಿಭಾಗದ ಡಿಸಿಪಿ  ಬಿ.ಪಿ ದಿನೇಶ್ ಕುಮಾರ್ ನಿರ್ದೇಶನದಂತೆ, ಮಂಗಳೂರು ಕೇಂದ್ರ ವಿಭಾಗದ ಎಸಿಪಿ ಪ್ರತಾಪ್ ಸಿಂಗ್ ತೋರಟ್, ಉರ್ವಾ ಠಾಣೆ ಇನ್‌ಸ್ಪೆಕ್ಟರ್‌ ಭಾರತೀ ಜಿ. ನೇತೃತ್ವದಲ್ಲಿ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆದಿದೆ.  ಉರ್ವಾ ಠಾಣೆಯ ಎಸ್.ಐಗಳಾದ ಹರೀಶ ಎಚ್.ವಿ , ಅನಿತಾ ಎಚ್.ಬಿ, ಎ.ಎಸ್.ಐಗಳಾದ ವಿನಯ್ ಕುಮಾರ್, ವೇಣುಗೋಪಾಲ್ ಸಿಬ್ಬಂದಿಗಳಾದ ಪುಷ್ಪರಾಜ್, ಪ್ರಮೋದ್, ನಾರಾಯಣ, ಸತೀಶ್, ಪೀಟರ್, ರಾಮಚಂದ್ರ ವೆಂಕಟೇಶ್, ಅಭಿಷೇಕ್, ಪ್ರಜ್ವಲ್, ನಗರದ ಗ್ರಾಮಾಂತರ ಠಾಣೆಯ ಪಿ.ಎಸ್.ಐ ಸದಾಶಿವ ತಿಪ್ಪರೆಡ್ಡಿ, ಸಿಬ್ಬಂದಿ ಖಾದರ್ ಅಲಿ, ಸುನೀ‌ಲ್, ಜಗದೀಶ್, ಯೋಗೀಶ್, ಮೂಲ್ಕಿ ಠಾಣೆಯ ಪಿ.ಎಸ್.ಐ  ವಿನಾಯಕ್ ಬಾವಿಕಟ್ಟೆ, ಎ.ಎಸ್.ಐ ಕಿಶೋರ್ ಕೋಟ್ಯಾನ್, ಸಿಬ್ಬಂದಿ ಹರೀಶೇಖರ್, ಚಂದ್ರಶೇಖರ್ ಹಾಗೂ ಶಶಿಧರ್‌ ಸಹಕರಿಸಿದ್ದರು. ಈ ಶೀಘ್ರ ಪತ್ತೆ ಕಾರ್ಯದಲ್ಲಿ ಹಾಸನ ಜಿಲ್ಲೆಯ ಎಸ್‌ಪಿ ಮಹಮ್ಮದ್ ಸುಜೀತಾ ಮತ್ತು  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಎಂ.ಕೆ , ಸಕಲೇಶಪುರ ಉಪ ವಿಭಾಗದ ಡಿವೈಎಸ್ಪಿ ಪ್ರಮೋದ್ ಬಿ., ಸಕಲೇಶಪುರ ನಗರ ಪಿ.ಎಸ್.ಐ ಪ್ರಮೋದ್ ಕೆ.ಎಸ್ ಮತ್ತು ಆರೋಪಿಯ ಬಂಧನಕ್ಕೆ ಸಹಕರಿಸಿದ್ದಾರೆ’ ಎಂದು ಪೊಲೀಸ್‌ ಇಲಾಖೆಯ ಪ್ರಕಟಣೆ ತಿಳಿಸಿದೆ.

ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡ ಪರಿಕರಗಳು

ಪಕ್ಕದ ಮನೆಗೆ ಓಡಿ ಪೊಲೀಸರಿಗೆ ವಿಷಯ ತಿಳಿಸಿದರು!

ದರೋಡೆ ನಡೆದಾಗ ವೃದ್ಧ ದಂಪತಿ ಬೊಬ್ಬೆ ಹಾಕಿದ್ದರು. ಆದರೆ ಮಳೆ ಬರುತ್ತಿದ್ದುದರಿಂದ ನೆರೆಮನೆಯವರಿಗೆ ಗೊತ್ತಾಗಿರಲಿಲ್ಲ. ಮನೆಯಲ್ಲಿದ್ದ ಮೊಬೈಲ್‌ಗಳನ್ನು ಒಡೆದು ಹಾಕಿದ್ದರಿಂದ ಏನು ಮಾಡಬೇಕೆಂದು ದಂಪತಿಗೆ ತೋಚಲಿಲ್ಲ. ದರೋಡೆಕೋರರು ಪರಾರಿಯಾದ ಬಳಿಕ ಪಕ್ಕದ ಮನೆ ಓಡಿ ಹೋಗಿ ವಿಷಯ ತಿಳಿಸಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಗೊತ್ತಾಗಿದೆ.

ಮನೆಯಲ್ಲಿ ವೃದ್ಧ ದಂಪತಿ ಮಾತ್ರ ವಾಸ

ವಿಕ್ಟರ್ ಮೆಂಡೋನ್ಸಾ–  ಪ್ಯಾಟ್ರಿಸಿಯಾ ಮೆಂಡೋನ್ಸ ವೃದ್ಧ ದಂಪತಿ ಅನೇಖ ವರ್ಷಗಳಿಂದ ಈ ಮನೆಯಲ್ಲಿ ಇಬ್ಬರೇ ವಾಸ ಇದ್ದಾರೆ. ಅವರಿಗೆ ಇಬ್ಬರು ಪುತ್ರದಿದ್ದು ಅವರು ಉದ್ಯೋಗ ನಿಮಿತ್ತ ವಿದೇಶದಲ್ಲಿ ನೆಲೆಸಿದ್ದಾರೆ. ಆಗಾಗ ಬಂದು ತಂದೆತಾಯಿಯನ್ನು ನೋಡಿಕೊಂಡು ಹೋಗುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ

‘ಕೋಡಿಕಲ್‌ ರಸ್ತೆ ಬಳಿಯ ಕಳವು

ಇದೇ ಗ್ಯಾಂಗ್‌ ಕೃತ್ಯ’ ಉರ್ವ ಠಾಣೆ ವ್ಯಾಪ್ತಿಯ ಕೋಡಿಕಲ್‌ ರಸ್ತೆ ಬಳಿಯ ಪುರಂದರ ಭಟ್‌ ಎಂಬುವರ ಮನೆಯಲ್ಲಿ ಭಾನುವಾರ ಮುಂಜಾನೆ ಕಿಟಕಿಯ ಗ್ರಿಲ್‌ ಕತ್ತರಿಸಿ ಒಳಗೆ ಪ್ರವೇಶಿಸಿ  ₹ 10 ಸಾವಿರ ನಗದನ್ನು ಕಳವು ಮಾಡಿದ್ದು ಕೂಡ ಇದೇ ಚಡ್ಡಿ ಗ್ಯಾಂಗ್‌ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲ ರೀತಿಯ ಪರಿಕರಗಳನ್ನು ಇಟ್ಟುಕೊಂಡು ಕಿಟಕಿ ಗ್ರಿಲ್ ಕತ್ತರಿಸಿ ಕಳವು ನಡೆಸುವ ಈ ‘ಚಡ್ಡಿ ಗ್ಯಾಂಗ್‌’ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ಎಚ್ಚರ ವಹಿಸುವಂತೆ ಉರ್ವ ಠಾಣೆಯ ಪೊಲೀಸರು ಸಾರ್ವಜನಿಕರಲ್ಲಿ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.