ADVERTISEMENT

ಬೇರೊಬ್ಬನ ಜೊತೆ ಮದುವೆಗೆ ಮುಂದಾಗಿದ್ದ ಪ್ರೇಯಸಿ ಕೊಲೆ: ಪ್ರಿಯತಮನಿಗೆ ಜೀವಾವಧಿ

ಫೇಸ್‌ಬುಕ್ ಪ್ರೇಮ ಕೊಲೆಯಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 13:22 IST
Last Updated 4 ಸೆಪ್ಟೆಂಬರ್ 2024, 13:22 IST
<div class="paragraphs"><p>ಜೈಲು ಶಿಕ್ಷೆ (ಪ್ರಾತಿನಿಧಿಕ ಚಿತ್ರ)</p></div>

ಜೈಲು ಶಿಕ್ಷೆ (ಪ್ರಾತಿನಿಧಿಕ ಚಿತ್ರ)

   

ಮಂಗಳೂರು: ತನ್ನ ಬದಲು ಬೇರೆ ವ್ಯಕ್ತಿಯನ್ನು ಮದುವೆಯಾಗಲು ಹೋಗಿದ್ದ ಪ್ರೇಯಸಿಯ ಕೊಲೆ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ರಾಂಪೂರದ ಬೆನೆಕಟ್ಟಿ ತಾಂಡಾದ ಸಂದೀಪ್ ರಾಥೋಡ್‌ಗೆ (23) ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹ 25 ಸಾವಿರ ದಂಡ ವಿಧಿಸಿದೆ.

ಅಪರಾಧಿಯು ದಂಡ ಪಾವತಿಸಲು ತಪ್ಪಿದರೆ ಮತ್ತೆ ಮೂರು ತಿಂಗಳ ಸಾದಾ ಸಜೆ ಅನುಭವಿಸಬೇಕು. ಕೊಲೆ ನಡೆಸಿದ ಮನೆಯಿಂದ ಕಳವು ನಡೆಸಿದ್ದಕ್ಕೆ ಮತ್ತೆ 3 ತಿಂಗಳು ಸಜೆ ಮತ್ತು ₹ 1 ಸಾವಿರ ದಂಡ ವಿಧಿಸಲಾಗಿದೆ. ಈ ದಂಡವನ್ನು ಪಾವತಿಸಲು ವಿಫಲವಾದರೆ 15 ದಿನಗಳ ಸಾದಾ ಸಜೆ ಅನುಭವಿಸಬೇಕು. ಯುವತಿಯ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಕ್ಕೆ 3 ತಿಂಗಳು ಸಜೆ ಮತ್ತು ₹ 500 ದಂಡ ವಿಧಿಸಲಾಗಿದೆ. ಈ ದಂಡವನ್ನು ಪಾವತಿಸಲು ತಪ್ಪಿದರೆ ಅಪರಾಧಿಯು ಮತ್ತೆ 15 ದಿನಗಳ ಸಾದಾ ಸಜೆ ಅನುಭವಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಎಮ್. ಜೋಶಿ ಅವರು ತೀರ್ಪಿನಲ್ಲಿ ತಿಳಿಸಿದ್ದಾರೆ.

ADVERTISEMENT

ಸಂದೀಪ್ ರಾಥೋಡ್‌ ಮೇಲಿನ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶ ರವೀಂದ್ರ ಎಂ. ಜೋಷಿ ಮಂಗಳವಾರ (ಸೆ.3) ಆದೇಶ ಮಾಡಿದ್ದರು. ಶಿಕ್ಷೆಯ ಪ್ರಮಾಣವನ್ನು ಬುಧವಾರ (ಸೆ.4) ಪ್ರಕಟಿಸಿದರು. ಸಂತ್ರಸ್ತ ಯುವತಿಯ ಪರಿಹಾರ ಯೋಜನೆ ಅಡಿಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಆಕೆಯ ಮನೆಯವರಿಗೆ ಪರಿಹಾರ ನೀಡಬೇಕೆಂದು ನಿರ್ದೇಶನ ನೀಡಿದರು.

ಪ್ರಕರಣವೇನು: ‘ಸಂದೀಪ್‌ ರಾಥೋಡ್‌ಗೆ 2018ರ ಜುಲೈನಲ್ಲಿ ಚಿಕ್ಕಮಗಳೂರು ತರೀಕೆರೆಯ ಅಂಜನಾ ವಸಿಷ್ಠ ಎಂಬುವರು ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದರು. ಆಕೆ ಉಜಿರೆಯಲ್ಲಿ ಹಾಸ್ಟೆಲ್‌ನಲ್ಲಿದ್ದುಕೊಂಡು ಎಂ.ಎಸ್‌ಸಿ ವ್ಯಾಸಂಗ ಮಾಡುತ್ತಿದ್ದರು. ನಂತರ ಅವರಿಬ್ಬರು ಪರಸ್ಪರ ಪ್ರೀತಿಸಿದ್ದರು. ಸಂದೀಪ್‌ಗೆ ಉದ್ಯೋಗ ಸಿಕ್ಕಿದ ಬಳಿಕ ಮದುವೆಯಾಗಲು ನಿರ್ಧಿಸಿದ್ದರು. ಸಂದೀಪ್‌ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸಲು ನಗರದ ಹಂಪನಕಟ್ಟೆಯ ರಾಯಲ್ ಕೋಚಿಂಗ್ ಸೆಂಟರ್‌ನಲ್ಲಿ 2019ರ ಜೂನ್ 1ರಂದು ಹೆಸರು ನೋಂದಾಯಿಸಿದ್ದ. ತರಬೇತಿ ವೇಳೆ ಉಳಿದುಕೊಳ್ಳಲು ನಗರದ ಅತ್ತಾವರದಲ್ಲಿ 6ನೇ ಅಡ್ಡರಸ್ತೆ ಬಳಿ ಇರುವ ಫ್ಲೋಸಿ ಪಾಯಸ್‌ ಅವರ ‘ಪಾಯಸ್ ಕಾಟೇಜ್‌’ನಲ್ಲಿ ಮೊದಲ ಮಹಡಿಯಲ್ಲಿ ಕೊಠಡಿಯನ್ನು ತಿಂಗಳಿಗೆ ₹ 2,500ರಂತೆ ಬಾಡಿಗೆಗೆ ಪಡೆದಿದ್ದ. ಈ ವೇಳೆ, ಫ್ಲೋಸಿ ಪಾಯಸ್ ಬಳಿ ಅವರಿಬ್ಬರು ಗಂಡ– ಹೆಂಡತಿ ಎಂದು ಪರಿಚಯಿಸಿಕೊಂಡಿದ್ದರು. ‘ಎಸ್‌.ಐ ಹುದ್ದೆಗೆ ಆಯ್ಕೆಯಾಗಿರುವ ನಾನು, ತರಬೇತಿ ಸಲುವಾಗಿ ಇಲ್ಲಿಗೆ ಬಂದಿದ್ದೇನೆ’ ಎಂಬುದಾಗಿ ಅವರಲ್ಲಿ ಸಂದೀಪ್‌ ತಿಳಿಸಿದ್ದ.’

‘ಈ ನಡುವೆ ಅಂಜನಾ ವಸಿಷ್ಠ ತನ್ನ ಊರಿಗೆ ಮರಳಿದಾಗ‌ ತಂದೆ ತಾಯಿ ಆಕೆಯನ್ನು ಬೇರೊಬ್ಬ ವ್ಯಕ್ತಿ ಜೊತೆ ಮದುವೆ ಮಾಡಲು ನಿರ್ಧರಿಸಿದ್ದರು. ಈ ವಿಚಾರವನ್ನು ಸಂದೀಪ್‌ಗೆ ತಿಳಿಸಿದ್ದ ಆಕೆ, ತನ್ನನ್ನು ಮರೆತುಬಿಡುವಂತೆ ವಿನಂತಿಸಿದ್ದರು. ಸಂದೀಪ್‌ ಆಕೆಯನ್ನು ಪುಸಲಾಯಿಸಿ 2019ರ ಜೂನ್ 7ರಂದು ನಗರದ ಅತ್ತಾವರದ ಬಾಡಿಗೆ ಕೊಠಡಿಗೆ ಕರೆಸಿಕೊಂಡಿದ್ದ. ಅಂದು ಆಕೆಯ ಕುತ್ತಿಗೆಗೆ ಕೇಬಲ್‌ ಟಿ.ವಿ.ಕೇಬಲ್ ಬಿಗಿದು ಕೊಲೆ ಮಾಡಿದ್ದ. ಮೃತದೇಹದ ಫೋಟೊ ಹಾಗೂ ವಿಡಿಯೊವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ಮೃತಳ ಎ.ಟಿ.ಎಂ ಕಾರ್ಡ್ ಹಾಗೂ ಮೊಬೈಲ್ ಫೋನನ್ನು ಕದ್ದು ನಗರದ ಬಿಜೈನ ಕೆ.ಎಸ್‌.ಆ‌ರ್.ಟಿ.ಸಿ ಬಸ್ ನಿಲ್ದಾಣದ ಬಳಿಯಿರುವ ಕಾರ್ಪೊರೇಶನ್ ಬ್ಯಾಂಕ್‌ ಎ.ಟಿ.ಎಂನಲ್ಲಿ ₹ 15 ಸಾವಿರ ಹಣ ಪಡೆದಿದ್ದ. ಬಳಿಕ ವಿಜಯಪುರ ಸಿಂದಗಿಗೆ ತೆರಳಿ ಅಲ್ಲಿನ ₹2,700 ಖರ್ಚು ಮಾಡಿ ಸಂಗಮ್ ಡೀಲಕ್ಸ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ. ಈ ವೇಳೆ ಪೊಲೀಸರು ಆತನನ್ನು ಬಂಧಿಸಿ, ಆತನಿಂದ ಮೃತಳ ಮೊಬೈಲ್, ಎಟಿಎಂ ಕಾರ್ಡ್ ಮತ್ತು ಯುವತಿಯ ಮೃತದೇಹದ ಫೋಟೋ ತೆಗೆದು ವಿಡಿಯೊ ಮಾಡಿದ್ದ ಆತನ ಮೊಬೈಲ್ ವಶಪಡಿಸಿಕೊಂಡಿದ್ದರು. ಆಕೆಯ ಎಟಿಎಂ ಕಾರ್ಡ್ ಬಳಸಿ ಪಡೆದಿದ್ದ ಹಣದಲ್ಲಿ ಉಳಿದಿದ್ದ ₹ 12,300 ನಗದನ್ನೂ ವಶಪಡಿಸಿಕೊಂಡಿದ್ದರು. ಮಂಗಳೂರು ದಕ್ಷಿಣ ಠಾಣೆಯ ಆಗಿನ ಪಿಎಸ್‌ಐ ರಾಜೇಂದ್ರ ಬಿ. ಹಾಗೂ ಇನ್‌ಸ್ಪೆಕ್ಟರ್‌ ಎಂ.ಕುಮಾ‌ರ್ ಆರಾಧ್ಯ ಅವರು ಪ್ರಕರಣದ ತನಿಖೆ ನಡೆಸಿದ್ದರು. ಇನ್‌ಸ್ಪೆಕ್ಟರ್ ಲೋಕೇಶ್ ಎ.ಸಿ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 302, 380, 403 ರ ಅಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.’

‘ಈ ಪ್ರಕರಣದಲ್ಲಿ ಒಟ್ಟು 45 ಸಾಕ್ಷಿದಾರರನ್ನು ವಿಚಾರಿಸಲಾಗಿದೆ. ಒಟ್ಟು 100 ದಾಖಲೆಗಳನ್ನು ಗುರುತಿಸಲಾಗಿದೆ’ ಎಂದು ಸರ್ಕಾರಿ ವಕೀಲರಾದ ಜುಡಿತ್ ಒಲ್ಗಾ ಮಾರ್ಗರೇಟ್ ಕ್ರಾಸ್ತಾ ತಿಳಿಸಿದರು.

ಸರ್ಕಾರಿ ವಕೀಲ ಬಿ. ಶೇಖರ್ ಶೆಟ್ಟಿ (ಈಗ ನಿವೃತ್ತರಾಗಿದ್ದಾರೆ) ಹಾಗೂ ಜುಡಿತ್ ಒಲ್ಗಾ ಮಾರ್ಗರೇಟ್ ಕ್ರಾಸ್ತಾ ಸಾಕ್ಷಿಗಳ ವಿಚಾರಣೆ ಮಾಡಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.