ಮೂಲ್ಕಿ: ಪರಂಪರೆ ಹಾಗೂ ಸೀಮೆಯ ಕಂಬಳವಾಗಿರುವ ಮೂಲ್ಕಿ ಅರಸು ಕಂಬಳವು ಅರಸು ವಂಶಸ್ಥ ಎಂ.ದುಗ್ಗಣ್ಣ ಸಾವಂತ ಅವರ ಮಾರ್ಗದರ್ಶನ, ಸಮಿತಿ ಅಧ್ಯಕ್ಷ ಕಿರಣ್ಕುಮಾರ್ ಶೆಟ್ಟಿ ಕೊಲ್ನಾಡುಗುತ್ತು ನೇತೃತ್ವದಲ್ಲಿ ಡಿ.24ರಂದು ನಡೆಯಲಿದೆ.
ಅರಮನೆಯ ನಾಗಬನದಲ್ಲಿ ಪೂಜಾ ವಿಧಿ ವಿಧಾನದ ಬಳಿಕ ಬಸದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಧರ್ಮ ಚಾವಡಿಯಲ್ಲಿ ಸಂಪ್ರದಾಯದಂತೆ ಕಂಬಳಕ್ಕೆ ಅರಸರು ಅಪ್ಪಣೆ ನೀಡಲಿದ್ದಾರೆ. ಕರಾವಳಿ ಭಾಗದ ವಿವಿಧೆಡೆಯಿಂದ ಬರುವ ಸುಮಾರು 200 ಜೋಡಿ ಕೋಣಗಳ ಯಜಮಾನರಿಗೆ ಪಡುಪಣಂಬೂರು ಮೂಲ್ಕಿ ಅರಮನೆಯ ಬಾಕಿಮಾರು ಗದ್ದೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೊನಲು ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿದೆ.
ಡಿ.25ರಂದು ಬಹುಮಾನ ವಿತರಣೆ: ಕಂಬಳವನ್ನು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸುವರು. ಬೆಳಿಗ್ಗೆ 8.30ಕ್ಕೆ ಪಡುಪಣಂಬೂರು ಸಂತೆಕಟ್ಟೆ ನಾಲ್ಕೂರು ಪಂಜುರ್ಜಿ ದೈವಸ್ಥಾನದಿಂದ ಮೆರವಣಿಗೆ ನಡೆಯಲಿದೆ.
ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದು, ಜಿ.ಶಂಕರ್ ಅಧ್ಯಕ್ಷತೆ ವಹಿಸುವರು. ಎಂ.ಎನ್.ರಾಜೇಂದ್ರಕುಮಾರ್ ಅವರಿಗೆ ಸನ್ಮಾನ ನಡೆಯಲಿದೆ.
ಅರಸು ಪ್ರಶಸ್ತಿಯನ್ನು ಮೂಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟಬಲ್ ಟ್ರಸ್ಟ್ ಹಾಗೂ ಹಳೆಯಂಗಡಿಯ ಪ್ರಿಯದರ್ಶಿನಿ ಕೊ–-ಆಪರೇಟಿವ್ ಸೊಸೈಟಿ ಸಂಯೋಜಿಸಿದೆ. ಅರಮನೆಯ ಕಾಂತಾಬಾರೆ ಬೂದಾಬಾರೆ ಧರ್ಮಚಾವಡಿಯಲ್ಲಿ ದುಗ್ಗಣ್ಣ ಸಾವಂತರು ಪ್ರಶಸ್ತಿ ಪ್ರದಾನ ಮಾಡುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.