ADVERTISEMENT

‘ಮೂಲ ಧ್ಯೇಯಕ್ಕೆ ಬದ್ಧವಾದ ಸಂಸ್ಥೆಗೆ ಸೋಲಿಲ್ಲ’

‘ನ್ಯಾಟ್‌ಕಾನ್‌ 2024’ ರಾಷ್ಟ್ರಿಯ ವಿಚಾರ ಸಂಕಿರಣ ಸಮಾರೋಪ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 7:18 IST
Last Updated 29 ಸೆಪ್ಟೆಂಬರ್ 2024, 7:18 IST
‘ನ್ಯಾಟ್‌ಕಾನ್‌ 2024’ ವಿಚಾರ ಸಂಕಿರಣದ ಸಮಾರೋಪದಲ್ಲಿ ಎಂ.ಪ್ರಸನ್ನ ಕುಮಾರ್ ಮಾತನಾಡಿದರು. ಲಕ್ಷ್ಮೀಶ ರೈ, ಪಿ.ಪಿ.ಶೆಟ್ಟಿ, ಪಿ.ಆರ್‌.ಬಸವರಾಜು, ಎಂ.ಎಚ್‌.ರಾಜಾ, ಕೆ.ಜಿ.‌ನಂಜಪ್ಪ, ಮಂಜುನಾಥ ಭಂಡಾರಿ, ಕೃಷ್ಣ ಹೆಗ್ಡೆ ಹಾಗೂ ಸ್ಟೀವನ್ ಪಿಂಟೊ ಭಾಗವಹಿಸಿದ್ದರು : ಪ್ರಜವಾಣಿ ಚಿತ್ರ
‘ನ್ಯಾಟ್‌ಕಾನ್‌ 2024’ ವಿಚಾರ ಸಂಕಿರಣದ ಸಮಾರೋಪದಲ್ಲಿ ಎಂ.ಪ್ರಸನ್ನ ಕುಮಾರ್ ಮಾತನಾಡಿದರು. ಲಕ್ಷ್ಮೀಶ ರೈ, ಪಿ.ಪಿ.ಶೆಟ್ಟಿ, ಪಿ.ಆರ್‌.ಬಸವರಾಜು, ಎಂ.ಎಚ್‌.ರಾಜಾ, ಕೆ.ಜಿ.‌ನಂಜಪ್ಪ, ಮಂಜುನಾಥ ಭಂಡಾರಿ, ಕೃಷ್ಣ ಹೆಗ್ಡೆ ಹಾಗೂ ಸ್ಟೀವನ್ ಪಿಂಟೊ ಭಾಗವಹಿಸಿದ್ದರು : ಪ್ರಜವಾಣಿ ಚಿತ್ರ   

ಮಂಗಳೂರು: ‘ಯಾವುದೇ ಸಂಸ್ಥೆಯು ಮೂಲ ಧ್ಯೇಯಗಳಿಗೆ ಬದ್ಧವಾಗಿರಬೇಕು. ಅದೇ ಸಂಸ್ಥೆಯ ಉನ್ನತಿಗೆ ಕಾರಣವಾಗುತ್ತದೆ’ ಎಂದು ನೈವೇಲಿ ಲಿಗ್ನೈಟ್‌ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಎಂ.ಪ್ರಸನ್ನ ಕುಮಾರ್ ಅಭಿಪ್ರಾಯಪಟ್ಟರು.

ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪರ್ಸೊನೆಲ್ ಮ್ಯಾನೇಜ್‌ಮೆಂಟ್‌ (ಎನ್‌ಐಪಿಎಂ) ‘2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತಕ್ಕೆ ಮಾನವ ಶಕ್ತಿ’ ಕುರಿತು ಇಲ್ಲಿ ಏರ್ಪಡಿಸಿದ್ದ ‘ನ್ಯಾಟ್‌ಕಾನ್‌ 2024’ ರಾಷ್ಟ್ರಿಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಶನಿವಾರ ಮಾತನಾಡಿದರು. 

‘ಪ್ರತಿಯೊಬ್ಬ ಉದ್ಯೋಗಿಯೂ ಸಂಸ್ಥೆಯ ಮೂಲಧ್ಯೇಯಗಳೇನೆಂಬುದನ್ನು ತಿಳಿದಿರಬೇಕು. ಕೆಲವರು ಕೆಲವೊಮ್ಮೆ ಇಲ್ಲದ ವಿಚಾರಗಳನ್ನು ತಲೆಗೆ ತುಂಬಿ ಧ್ಯೇಯದಿಂದ ವಿಮುಖವಾಗಲು ಒತ್ತಡ ಹೇರಬಹುದು. ಅವನ್ನೆಲ್ಲ ಮೀರಿ ಗುರಿಸಾಧನೆಯತ್ತ ಗಮನ ಕೇಂದ್ರೀಕರಿಸುವ ಕಂಪನಿ ಯಾವತ್ತೂ ಸೋಲಲು ಸಾಧ್ಯವಿಲ್ಲ’ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ‘ಯಾವುದೇ ಸಂಸ್ಥೆಯ ಯಶಸ್ಸು ಮಾನವ ಸಂಪನ್ಮೂಲ ನಿರ್ವಹಣೆ ವಿಭಾಗದ ಕೈಯಲ್ಲಿದೆ. ಅವರು ಸರಿಯಾದ ವ್ಯಕ್ತಿಗಳಿಗೆ ಸರಿಯಾದ ಕೆಲಸ ವಹಿಸಿದರೆ ಸಂಸ್ಥೆ ಗೆಲ್ಲುತ್ತದೆ. ಕೆಲಸವನ್ನು ತಪ್ಪು ವ್ಯಕ್ತಿಗೆ ವಹಿಸಿದರೆ ಸಂಸ್ಥೆ ಅವನತಿಯತ್ತ ಸಾಗುತ್ತದೆ. ಸಂಸ್ಥೆಯ ಭೌತಿಕ, ಮಾನಸಿಕ ಆರೋಗ್ಯದ ಜೊತೆಗೆ ಆರ್ಥಿಕ ಆರೋಗ್ಯದತ್ತಲೂ ಅವರು ಕಾಳಜಿ ವಹಿಸಬೇಕು’ ಎಂದು ಹೇಳಿದರು.

ಎಂಆರ್‌ಪಿಎಲ್‌ನ ಮಾನವ ಸಂಪನ್ಮೂಲ ವಿಭಾಗದ ಸಮೂಹ ಪ್ರಧಾನ ವ್ಯವಸ್ಥಾಪಕ ಎಂ.ಕೃಷ್ಣ ಹೆಗ್ಡೆ, ‘ತಂತ್ರಜ್ಞಾನದ ಬೆಳವಣಿಗೆಯ ವೇಗಕ್ಕೆ ಆತಂಕ ಪಡಬೇಕಿಲ್ಲ. ದಶಕಗಳ ಹಿಂದೆ ಕಂಪ್ಯೂಟರ್‌ ಲಗ್ಗೆ ಇಟ್ಟಾಗಲೂ ಇದೇ ತೆರನಾದ ಆತಂಕವಿತ್ತು. ಆದರೆ ಭಾರತ ಎಲ್ಲ ಸವಾಲುಗಳನ್ನು ಮೆಟ್ಟಿ ಕಂಪ್ಯೂಟರ್‌ ಹಾಗೂ ಸಾಫ್ಟ್‌ವೇರ್‌ ಕ್ಷೇತ್ರದ ದಿಗ್ಗಜನಾಗಿ ಹೊರಹೊಮ್ಮಿತು.  ಜಿಡಿಪಿ ಹಾಗೂ ಆರ್ಥಿಕ ಅಭಿವೃದ್ಧಿಯತ್ತ ಮಾತ್ರ ಗಮನ ವಹಿಸಿದರೆ ಸಾಲದು. ಅದರ ಸಮಾನ ಪಾಲು ಎಲ್ಲರಿಗೂ ಸಿಗಬೇಕು. ನಗರ ಮತ್ತು ಪಟ್ಟಣಗಳ ನಡುವೆ ಶಿಕ್ಷಣ ವೈದ್ಯಕೀಯ ಸೌಕರ್ಯ, ಶುದ್ಧ ಆಹಾರ, ಗಾಳಿ, ನೀರುಗಳ ಲಭ್ಯತೆ ವಿಚಾರಗಳಲ್ಲಿ ತಾರತಮ್ಯ ಮುಂದುವರಿಯದಂತೆ ನೋಡಿಕೊಳ್ಳಬೇಕಿದೆ‘ ಎಂದರು.  

ಕಾರ್ಖಾನೆ, ಬಾಯ್ಲರು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕೆ.ಜಿ.‌ನಂಜಪ್ಪ, ಎನ್‌ಐಪಿಎಂ ಅಧ್ಯಕ್ಷ ಎಂ.ಎಚ್‌.ರಾಜಾ,  ಪ್ರಧಾನ ಕಾರ್ಯದರ್ಶಿ ಪಿ.ಆರ್‌.ಬಸವರಾಜು, ಮಂಗಳೂರು ವಲಯದ ಅಧ್ಯಕ್ಷ ಮತ್ತು ಸಂಚಾಲಕ ಸ್ಟಿವನ್ ಪಿಂಟೊ, ಕಾರ್ಯದರ್ಶಿ ಲಕ್ಷ್ಮೀಶ ರೈ, ಕಾರ್ಯಕ್ರಮ ಸಂಘಟನಾ ಸಮಿತಿ ಅಧ್ಯಕ್ಷ ಪಿ.ಪಿ.ಶೆಟ್ಟಿ ಭಾಗವಹಿಸಿದ್ದರು. ಮೋನಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.