ಮಂಗಳೂರು: ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾಲಯದಲ್ಲಿ ಏಳು ದಿನಗಳ ರಾಷ್ಟ್ರೀಯ ಭಾವೈಕ್ಯ ಶಿಬಿರ ಆರಂಭವಾಗಿದ್ದು, ಕರ್ನಾಟಕ, ಗೋವಾ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್ ರಾಜ್ಯಗಳ 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ರಾಜ್ಯ ಎನ್.ಎಸ್.ಎಸ್. ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರ ಮತ್ತು ಎನ್.ಎಸ್.ಎಸ್. ಘಟಕದಲ್ಲಿ ಶುಕ್ರವಾರದಿಂದ ಪ್ರಾರಂಭವಾಗಿರುವ ಶಿಬಿರಕ್ಕೆ ವಿಧಾನ ಸಭೆ ಅಧ್ಯಕ್ಷ ಯು.ಟಿ. ಖಾದರ್ ಚಾಲನೆ ನೀಡಿದರು.
ದೇಶದ ಏಕತೆ ಮತ್ತು ಯುವ ಸಬಲೀಕರಣಕ್ಕೆ ರಾಷ್ಟ್ರೀಯ ಭಾವೈಕ್ಯ ಶಿಬಿರ ನೀಡುವ ಕೊಡುಗೆ ಮಹತ್ವದ್ದು. ಯುವಜನರಲ್ಲಿ ಆತ್ಮವಿಶ್ವಾಸ ಬೆಳೆಸುವ, ಬದುಕು ರೂಪಿಸಲು ಸಹಕಾರಿಯಾಗಿರುವ ಎನ್.ಎಸ್.ಎಸ್.ನ ಆದರ್ಶ ಶ್ಲಾಘನೀಯ ಎಂದು ಖಾದರ್ ಹೇಳಿದರು.
ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಎನ್.ಎಸ್.ಎಸ್. ಅಧಿಕಾರಿ ಪ್ರತಾಪ್ ಲಿಂಗಯ್ಯ, ಪ್ರಾದೇಶಿಕ ನಿರ್ದೇಶಕ ಕಾರ್ತಿಗೆನ್, ಲೆಫ್ಟಿನೆಂಟ್ ಕರ್ನಲ್ ಗ್ರೇಸಿಯಸ್ ಸಿಕ್ವೇರಾ ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಮುನ್ನ ಕುತ್ತಾರು ತನಕ ನಡೆದ ಮೆರವಣಿಗೆಗೆ ಕುಲಸಚಿವ ಗಂಗಾಧರ ಸೋಮಯಾಜಿ ಚಾಲನೆ ನೀಡಿದರು.
ಎನ್.ಎಸ್.ಎಸ್ ಘಟಕ ಸಂಯೋಜಕಿ ಡಾ. ಅಶ್ವಿನಿ ಶೆಟ್ಟಿ ಸ್ವಾಗತಿಸಿದರು. ಅವರಿಲ್ ರೆಬೊಲ್ಲೊ ವಂದಿಸಿದರು. ನವ್ಯಾ ಮತ್ತು ಶಿಫಾಲಿ ಅಭಿಲಾಷ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.