ADVERTISEMENT

ದ.ಕ: ಮತ್ತಿಬ್ಬರಿಂದ ನಾಮಪತ್ರ

ಇದುವರೆಗೆ 6 ಮಂದಿಯಿಂದ ಉಮೇದುವಾರಿಕೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 3:05 IST
Last Updated 3 ಏಪ್ರಿಲ್ 2024, 3:05 IST

ಮಂಗಳೂರು: ನಾಮಪತ್ರಗಳ ಸಲ್ಲಿಕೆಯ ನಾಲ್ಕನೇ ದಿನವಾದ  ಮಂಗಳವಾರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ದೀಪಕ್ ರಾಜೇಶ್ ಕುವೆಲ್ಲೊ ಹಾಗೂ ಉತ್ತಮ ಪ್ರಜಾಕೀಯ ಪಕ್ಷದಿಂದ ಕೆ.ಇ. ಮನೋಹರ ನಾಮಪತ್ರ ಸಲ್ಲಿಸಿದ್ದಾರೆ.

ದೀಪಕ್‌ ರಾಜೇಶ್‌ ಕುವೆಲ್ಲೊ ಅವರು ಪಕ್ಷೇತರ ಅಭ್ಯರ್ಥಿಯಾಗಿ ಶನಿವಾರವು ನಾಮಪತ್ರ ಸಲ್ಲಿಸಿದ್ದರು. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಆರು ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.

ಅಭ್ಯರ್ಥಿಗಳು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದ ಪ್ರಕಾರ ಅವರ ಆಸ್ತಿ ವಿವರಗಳು ಇಂತಿವೆ.  ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಕೆ.ಇ.ಮನೋಹರ ಅವರು ₹ 53 ಸಾವಿರ ಚರಾಸ್ತಿ ಹೊಂದಿದ್ದಾರೆ. ಅವರಿಗೆ ಪಿತ್ರಾರ್ಜಿತವಾಗಿ ಬಂದ 26 ಸೆಂಟ್ಸ್‌ ಕೃಷಿ ಜಮೀನು ಇದ್ದು, ಅದರ ಮೌಲ್ಯ ₹ 6 ಲಕ್ಷ. ಯಾವುದೇ ಸಾಲ ಹೊಂದಿಲ್ಲ. ಅವರು ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಅವರ ಪತ್ನಿ ಕೆ.ಎಂ. ಶಾರದಾ ಬಳಿ ₹12,720 ಚರಾಸ್ತಿ ಇದೆ. 

ADVERTISEMENT

ಪಕ್ಷೇತರ ಅಭ್ಯರ್ಥಿ ದೀಪಕ್ ರಾಜೇಶ್ ಕುವೆಲ್ಲೊ (48 ವರ್ಷ) ಕಾರು, ಬೈಕ್‌, ನಗ ಹಾಗೂ ನಗದು ಸೇರಿ ₹ 4.60 ಲಕ್ಷ ಮೌಲ್ಯದ ಚರಾಸ್ತಿ ಇದೆ. ಪತ್ನಿ ಶೀನಾ ಜೋಸೆಫ್‌ ಬಳಿ ನಗದು ಹಾಗೂ ಚಿನ್ನಾಭರಣ ಸೇರಿ ₹ 6.30 ಲಕ್ಷ ಮೌಲ್ಯದ ಚರಾಸ್ತಿ ಇದೆ. ಪತ್ನಿ ಹೆಸರಿನಲ್ಲಿ ನಗರದಲ್ಲಿ 6 ಸೆಂಟ್ಸ್‌ ಜಮೀನು ಇದ್ದು, ಅದರ ಈಗಿನ ಮಾರುಕಟ್ಟೆ ದರ ₹ 90 ಲಕ್ಷ. ಪಿ.ಯು, ಐಟಿಐ ವ್ಯಾಸಂಗ ಮಾಡಿದ್ದಾರೆ.

ಪಕ್ಷೇತರ ಅಭ್ಯರ್ಥಿ ದುರ್ಗಾಪ್ರಸಾದ್‌ 1.33 ಲಕ್ಷ ಚರಾಸ್ತಿ ಹಾಗೂ 25 ಲಕ್ಷ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರಿಗೆ ಒಟ್ಟು ₹13.21 ಲಕ್ಷ ಸಾಲವಿದೆ. ವಾರ್ಷಿಕ ₹4.73 ಲಕ್ಷ ವರಮಾನ ಹೊಂದಿದ್ದಾರೆ. ಅವರ ಪತ್ನಿ ದೀಕ್ಷಿತಾ ₹ 11.45 ಲಕ್ಷ ಮೌಲ್ಯದ ಚರಾಸ್ತಿ ಹಾಗೂ ₹ 25 ಲಕ್ಷ ಮೌಲ್ಯದ ಸ್ಥಿರಾಸ್ತಿ ಹಾಗೂ ₹ 5 ಲಕ್ಷ ಸಾಲ ಹೊಂದಿದ್ದಾರೆ. ಪಿ.ಯು.ವರೆಗೆ ವ್ಯಾಸಂಗ ಮಾಡಿರುವ ಇವರು ಸಿನಿಮಾ ಸಂಕಲನ ಮತ್ತು ನಿರ್ದೇಶನ ವೃತ್ತಿಯಲ್ಲಿ ತೊಡಗಿದ್ದಾರೆ.

ಕೆ.ಆರ್‌.ಎಸ್‌ ಪಕ್ಷದ ರಂಜಿನಿ ಎಂ. ₹  3.62 ಲಕ್ಷ ಮೌಲ್ಯದ ಚರಾಸ್ತಿ ಹಾಗೂ 1 ಎಕರೆ 29 ಸೆಂಟ್ಸ್‌ ಕೃಷಿ ಜಮೀನು ಹೊಂದಿದ್ದು, ಅದರ ಮೌಲ್ಯ ₹ 20 ಲಕ್ಷ. ಅವರ ತಾಯಿ ಸುಶೀಲಾ ₹ 85 ಸಾವಿರ ಮೌಲ್ಯದ ಚರಾಸ್ತಿ ಹಾಗೂ 1 ಎಕರೆ 2ಸೆಂಟ್ಸ್‌ ಕೃಷಿ ಜಮೀನು ಹೊಂದಿದ್ದು ಅದರ ಮೌಲ್ಯ ₹ 10 ಲಕ್ಷ. ರಂಜಿನಿ ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.