ಮಂಗಳೂರು: ‘ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮನ್ಸೂಲ್ ಅಲಿ ಏಜೆಂಟ್ ಮೂಲಕ ₹ 25 ಲಕ್ಷ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಅಧಿಕಾರಿಗಳು ಸಾರ್ವಜನಿಕರಿಗೆ ಕಿರುಕುಳ ನೀಡಿ ಹಣ ಪಡೆದು ಕಾಂಗ್ರೆಸ್ ಪಕ್ಷಕ್ಕೆ ನೀಡುತ್ತಿದ್ದಾರೆ ಎಂಬ ಸಂಶಯ ಮೂಡಿದೆ’ ಎಂದು ಜದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿಯ ಚುನಾವಣಾ ಪ್ರಭಾರಿ ರವಿಶಂಕರ ಮಿಜಾರ್ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು,‘ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಮುಳುಗಿತ್ತು. ಮನ್ಸೂರ್ ಅಲಿ ಮುಡಾ ಆಯುಕ್ತರಾಗಿ ಬರುವಾಗಲೇ ಈ ಬಗ್ಗೆ ಗುಸುಗುಸು ಇತ್ತು’ ಎಂದರು.
‘ಮುಡಾ ಅಧ್ಯಕ್ಷನಾಗಿದ್ದಾಗ ನಾನು ಸಹಾಯಕೇಂದ್ರವನ್ನು ಆರಂಭಿಸಿ ಜನರಿಗೆ ಸುಲಭದಲ್ಲಿ ಸೇವೆ ಸಿಗುವಂತೆ ಮಾಡಿದ್ದೆ. ಲಂಚದ ಹಾವಳಿಗೆ ಕಡಿವಾಣ ಹಾಕಿದ್ದೆ. ಮೂಡಾ ಅಧಿಕಾರಿಗಳ ಲಂಚಕೋರತನಕ್ಕೆ ಸರ್ಕಾರ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗಡೆ, ಲಲ್ಲೇಶ್, ಮುಖಂಡ ರಾಧಾಕೃಷ್ಞ, ಮಾಧ್ಯಮ ಪ್ರಮುಖ್ ಮನೋಹರ ಕದ್ರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.