ADVERTISEMENT

ಭಕ್ತರಿಗೆ ಸೂರು; ರಾಮನಿಗೆ ನೀಡುವ ಸೇವೆ

ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 19:44 IST
Last Updated 29 ಡಿಸೆಂಬರ್ 2023, 19:44 IST
<div class="paragraphs"><p>ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ</p></div>

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

   

ಮಂಗಳೂರು: ‘ದೇಶ ಸೇವೆಯೇ ಶ್ರೀರಾಮನಿಗೆ ಮಾಡುವ ಸೇವೆಯಾಗಿದೆ. ಶ್ರೀರಾಮನಿಗೆ ಮನೆ (ಮಂದಿರ) ನಿರ್ಮಾಣವಾಗಿದೆ. ಅದೇ ರೀತಿ ರಾಮರಾಜ್ಯದಲ್ಲಿ ದೀನರು, ದುರ್ಬಲರಿಗೆ ಪುಟ್ಟ ಮನೆ ನಿರ್ಮಿಸಿಕೊಡುವ ಮೂಲಕ ಶ್ರೀರಾಮನ ಸೇವೆಗೆ ಮುಕ್ತ ಅವಕಾಶ ಒದಗಿಸಲಾಗಿದೆ’ ಎಂದು ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಸಮಿತಿ ಸದಸ್ಯರಾಗಿರುವ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ಉಡುಪಿಯಲ್ಲಿ ಈ ಕಾರ್ಯ ಆರಂಭಿಸಲಾಗಿದ್ದು, ಮೂರ್ನಾಲ್ಕು ಜನರಿಗೆ ಮನೆ ನಿರ್ಮಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ರಾಮರಾಜ್ಯ ಸಮಿತಿ ರಚಿಸಿ, ಈ ‘ರಾಮರಾಜ್ಯ’ ಅಭಿಯಾನವನ್ನು ತಾಲ್ಲೂಕು, ಜಿಲ್ಲಾ ಮಟ್ಟಗಳಲ್ಲಿ ನಡೆಸಲು ಯೋಚಿಸಲಾಗಿದೆ. ರಾಮನಿಗೆ ಭವ್ಯ ಮಂದಿರ ನಿರ್ಮಾಣವಾದ ಮೇಲೆ ರಾಮಭಕ್ತರಿಗೆ ಸೂರು ಇಲ್ಲದೆ ಇರಬಾರದು. ಆರ್ಥಿಕ ಶಕ್ತಿ ಇದ್ದವರು, ತಮ್ಮ ಸುತ್ತಲಿನ ಬಡವರನ್ನು ಗುರುತಿಸಿ, ನೆರವಾಗಬಹುದು. ಒಬ್ಬರ ಬಳಿ ಆಗದಿದ್ದಲ್ಲಿ ಮೂರ್ನಾಲ್ಕು ಜನರು ಸೇರಿ ಒಬ್ಬರಿಗೆ ಮನೆ ನಿರ್ಮಿಸಿಯೂ ಕೊಡಬಹುದು. ಇದಕ್ಕೆ ಒಂದು ಪ್ರತ್ಯೇಕ ವೆಬ್‌ಸೈಟ್ ಮಾಡುವ ಯೋಚನೆಯೂ ಇದೆ. ಇದರಲ್ಲಿ ರಾಮರಾಜ್ಯ ಸಮಿತಿಯ ಹಸ್ತಕ್ಷೇಪ ಇರುವುದಿಲ್ಲ’ ಎಂದರು. 

ADVERTISEMENT

‘ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಗೆ ರಾಜಕೀಯ ಬೆರೆಸುವುದು ಸರಿಯಲ್ಲ. ಮಂದಿರವನ್ನು ಎರಡೂವರೆ ವರ್ಷದಲ್ಲಿ ನಿರ್ಮಾಣ ಮಾಡುವ ಬಗ್ಗೆ ಎಲ್‌ ಆ್ಯಂಡ್ ಟಿ ಹಾಗೂ ಟಾಟಾ ಕಂಪನಿ ಜೊತೆ ಮಾತುಕತೆ ನಡೆಸಲಾಗಿತ್ತು. ಆಗ ಅಯೋಧ್ಯೆಯ ಮಣ್ಣಿನ ಧಾರಣಾ ಸಾಮರ್ಥ್ಯದ ಪರೀಕ್ಷೆ ನಡೆದಿರಲಿಲ್ಲ. ಮರಳು ಪ್ರದೇಶವಾಗಿದ್ದ ಅಲ್ಲಿ, 50 ಅಡಿ ಆಳದಲ್ಲಿ ಬಲವಾದ ವೇದಿಕೆ ನಿರ್ಮಿಸಿ, ಅಡಿಪಾಯ ಹಾಕಲಾಗಿದೆ. ಹೀಗಾಗಿ, ಮಂದಿರ ನಿರ್ಮಾಣಕ್ಕೆ ಹೆಚ್ಚು ಸಮಯ ಬೇಕಾಯಿತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.