ಬೆಳ್ತಂಗಡಿ: ತಾಲ್ಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ, ತೈಲ ಬೆಲೆ ಏರಿಕೆ ಖಂಡಿಸಿ ಮಂಗಳವಾರ ಬಿಜೆಪಿ ಬೆಳ್ತಂಗಡಿ ಮಂಡಲ ಘಟಕದಿಂದ ಇಲ್ಲಿನ ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಯಿತು.
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದ ಬಿಜೆಪಿ ಕಾರ್ಯಕರ್ತರು ಬೆಳ್ತಂಗಡಿ ಅಯ್ಯಪ್ಪ ಗುಡಿಯ ಬಳಿ ಒಟ್ಟು ಸೇರಿ ಅಲ್ಲಿಂದ ಆಡಳಿತ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಕಾರ್ಯಕರ್ತರ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ತೈಲ ಬೆಲೆ ಏರಿಕೆ ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ‘ಬೆಳ್ತಂಗಡಿಯಲ್ಲಿ ಹಿಂದೆ ದ್ವೇಷದ ರಾಜಕಾರಣ ಇರಲಿಲ್ಲ, ವಸಂತ ಬಂಗೇರ ಶಾಸಕರಾಗಿದ್ದವರು. ಅವರು ಯಾವತ್ತು ದ್ವೇಷದ ರಾಜಕಾರಣ ಮಾಡಿದವರಲ್ಲ, ಆದರೆ ಕಳೆದ ಒಂದು ವರ್ಷದಿಂದ ನಮ್ಮ ತಾಲ್ಲೂಕಿನಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ದ್ವೇಷ ರಾಜಕಾರಣಕ್ಕೆ ಮಲ್ಲೇಶ್ವರದಿಂದ ಬೆಳ್ತಂಗಡಿಗೆ ಆಗಮಿಸಿರುವ ರೌಡಿ ಪುಡಾರಿಯೇ ಕಾರಣರಾಗಿದ್ದಾರೆ’ ಎಂದು ಆರೋಪಿಸಿದರು.
‘ಇವತ್ತು ಪ್ರತಿಭಟನೆಯಲ್ಲಿ 250 ಪೊಲೀಸರು ಇದ್ದಾರೆ. ಈ ರೀತಿ ವ್ಯವಸ್ಥೆ ನಿರ್ಮಾಣವಾಗಲು ಕಾರಣ ಏನೆಂದರೆ, ಬೆಳ್ತಂಗಡಿಯಲ್ಲಿ ಬಿಜೆಪಿ ಕಾರ್ಯಕರ್ತರರನ್ನು ಮುಟ್ಟಿದರೆ, ನಾವು ಬಿಡುವುದಿಲ್ಲ, ನಾವು ರಸ್ತೆಗೆ ಇಳಿಯುತ್ತೇವೆ. ಅಷ್ಟು ಶಕ್ತಿ ಕಾರ್ಯಕರ್ತರಲ್ಲಿದೆ. ಇದಕ್ಕೆ ಹೆದರಿ ಕಾಂಗ್ರೆಸ್ನವರು ಪೊಲೀಸರನ್ನು ರಸ್ತೆಗೆ ಇಳಿಯುವಂತೆ ಮಾಡಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರ ಹೊರಾಟಕ್ಕೆ ಜಯವಾಗಿದೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಮುಖಂಡ ಹರಿಕೃಷ್ಣ ಬಂಟ್ವಾಳ, ಕುಶಾಲಪ್ಪ ಗೌಡ ಪೂವಾಜೆ, ಪ್ರಸಾದ್ ಕುಮಾರ್ ಬೆಳ್ತಂಗಡಿ, ಜಯಂತ್ ಕೋಟ್ಯಾನ್, ಸೀತಾರಾಮ್ ಬೆಳಾಲು, ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ, ಕೊರಗಪ್ಪ ನಾಯ್ಕ್, ಧನಲಕ್ಷ್ಮೀ ಜನಾರ್ದನ್, ವೇದಾವತಿ, ಉಮೇಶ್ ಕುಲಾಲ್, ಚಂದ್ರಕಲಾ, ಗಣೇಶ್ ಗೌಡ, ಶಶಿಧರ್ ಕಲ್ಮಂಜ, ಶಶಿರಾಜ್ ಶೆಟ್ಟಿ , ವಿದ್ಯಾ ಶ್ರೀನಿವಾಸ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.