ಮಂಗಳೂರು: ಸಮಾಜದಲ್ಲಿ ಸೌಹಾರ್ದ, ಸಮಾನತೆ, ಪ್ರೀತಿ–ವಿಶ್ವಾಸ ಕಾಪಾಡುವಲ್ಲಿ ಪತ್ರಕರ್ತರ ಕೊಡುಗೆ ದೊಡ್ಡದು. ಮಾಧ್ಯಮಗಳ ಮೂಲಕ ರವಾನೆಯಾಗುವ ಸಂದೇಶವು ಯುವ ಜನರ ಮನಸ್ಸಿನಲ್ಲಿ ಪರಿವರ್ತನೆ ಮೂಡಿಸಲು ಸಹಕಾರಿಯಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಇಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯಲ್ಲಿ ಅವರು, ಪತ್ರಿಕಾ ವಿತರಕ 94 ವರ್ಷದ ತಾರಾನಾಥ್ ಕಾಮತ್ ಅವರನ್ನು ಸನ್ಮಾನಿಸಿ ಖಾದರ್ ಮಾತನಾಡಿದರು.
ಪತ್ರಿಕೆಗಳ ಓದು ವಿದ್ಯಾರ್ಥಿಗಳ ಬದುಕಿನ ಭಾಗವಾಗಬೇಕು. ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಷಯಗಳನ್ನು ಅರಿತು ವಿವೇಚನೆ ಬೆಳೆಸಿಕೊಂಡಾಗ, ವ್ಯಕ್ತಿತ್ವ ಬೆಳವಣಿಗೆಯ ಜೊತೆಗೆ ವಿವೇಕ ಪ್ರಜ್ಞೆ ಮೂಡುತ್ತದೆ ಎಂದ ಅವರು, ಕ್ಷೇತ್ರಕಾರ್ಯದಲ್ಲಿ ಇನ್ನಷ್ಟು ನೈಪುಣ್ಯ ಸಾಧಿಸಲು ಪತ್ರಕರ್ತರಿಗೂ ಆಗಾಗ ವೃತ್ತಿಗೆ ಪೂರಕವಾದ ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.
‘ಮಾಧ್ಯಮ ಹಾಗೂ ಸಾಮಾಜಿಕ ಜವಾಬ್ದಾರಿ’ ಕುರಿತು ಉಪನ್ಯಾಸ ನೀಡಿದ ಲೇಖಕಿ ಭುವನೇಶ್ವರಿ ಹೆಗಡೆ, ‘ಪತ್ರಕರ್ತರು ಸಂಯಮ, ಸ್ವಯಂ ನಿಯಂತ್ರಣದ ಗುಣ ಹೊಂದಿರುವುದು ಅತಿ ಮುಖ್ಯ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಪತ್ರಕರ್ತರು ಮೈಯೆಲ್ಲ ಕಣ್ಣಾಗಿ ಸಮಾಜದ ಆಗುಹೋಗುಗಳನ್ನು ಗಮನಿಸಬೇಕಾಗುತ್ತದೆ. ಇಂತಹ ಒತ್ತಡದ ಕೆಲಸದ ನಡುವೆ ಹಾಸ್ಯ ಪ್ರಜ್ಞೆಯನ್ನು ಬೆಳೆಸಿಕೊಂಡರೆ ಕೆಲಸ ತುಸು ಹಗುರಾಗುತ್ತದೆ’ ಎಂದರು.
ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಸ್ವಾಗತಿಸಿದರು. ವಿಜಯ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಜಿತೇಂದ್ರ ಕುಂದೇಶ್ವರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.