ADVERTISEMENT

ಲೋಕಸಭಾ ಚುನಾವಣೆ: ಹಿಂದುಳಿದ ಸಮುದಾಯಕ್ಕೆ ಟಿಕೆಟ್ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 6:08 IST
Last Updated 18 ಜನವರಿ 2024, 6:08 IST

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಈವರೆಗೂ ಹಿಂದುಳಿದ ಬಿಲ್ಲವ, ಗಾಣಿಗ, ಮೊಗವೀರ, ಕುಲಾಲ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ. ಈ ಬಾರಿ ಹಿಂದುಳಿದ ವರ್ಗಗಳ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ರಾಜ್ಯ ಮೀನುಗರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಮಚಂದ್ರ ಬೈಕಂಪಾಡಿ ಒತ್ತಾಯಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಲವು ನಾನು ಟಿಕೆಟ್ ವಂಚಿತನಾಗಿದ್ದೇನೆ. 2007ರಲ್ಲಿ ದೆಹಲಿಯಲ್ಲಿ ನಡೆದ ಬಿಜೆಪಿ ಮೀನುಗಾರರ ಸಮಾವೇಶದಲ್ಲಿ, ಮೀನುಗಾರರಿಗೆ ಒಂದು ಕಡೆ ಟಿಕೆಟ್ ನೀಡುವಂತೆ ವಿನಂತಿಸಿದ್ದಾರೆ. ಪಕ್ಷದ ಆಗಿನ ರಾಷ್ಟ್ರೀಯ ಅಧ್ಯಕ್ಷ  ಕುಸಬಾವು ಠಾಕ್ರೆ ಇದಕ್ಕೆ ಸ್ಪಂದಿಸಿ 2008ರ ಚುನಾವಣೆ ವೇಳೆಗೆ ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಮೀನುಗಾರರಿಗೆ ಟಿಕೆಟ್ ನೀಡುವುದಾಗಿ ಘೋಷಿಸಿದ್ದರು. ವಿ.ಎಸ್. ಆಚಾರ್ಯ ಅವರು ನನಗೆ ಸ್ಪರ್ಧಿಸಲು ಅವಕಾಶ ನೀಡಿದ್ದರೂ, ಕಾಂಗ್ರೆಸ್‌ನಿಂದ ಬಂದ ಮನೋರಮಾ ಮಧ್ವರಾಜ್ ಸ್ಪರ್ಧಿಸಿ ಗೆಲುವು ಸಾಧಿಸಿದರು. ಈ ಬಾರಿಯಾದರೂ ನನಗೆ ಟಿಕೆಟ್ ನೀಡುವಂತೆ ವಿನಂತಿಸಿದ್ದೇನೆ’ ಎಂದರು.

‘ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿ ಆಂತರಿಕವಾಗಿ ಕೆಲವು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಹಾಲಿ ಸಂಸದ ನಳಿನ್‌ಕುಮಾರ್ ಕಟೀಲ್ ಅವರಿಗೇ ಟಿಕೆಟ್ ನೀಡುವ ಕುರಿತು ಪ್ರಸ್ತಾಪವಾಗಿದೆ. ನಳಿನ್‌ಕುಮಾರ್ ಅಥವಾ ಇನ್ನಾರಿಗೇ ಪಕ್ಷ ಟಿಕೆಟ್ ನೀಡಿದರೂ, ಅದಕ್ಕೆ ಬೆಂಬಲ ನೀಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.