ADVERTISEMENT

ನವೀನ್‌ ಪಡೀಲ್‌ಗೆ ರಂಗಭಾಸ್ಕರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಮೇ 2024, 12:38 IST
Last Updated 1 ಮೇ 2024, 12:38 IST
ನವೀನ್‌ ಡಿ. ಪಡೀಲ್‌
ನವೀನ್‌ ಡಿ. ಪಡೀಲ್‌   

ಮಂಗಳೂರು: ಇಲ್ಲಿನ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನವು ವಾರ್ಷಿಕವಾಗಿ ನೀಡುವ ರಂಗಭಾಸ್ಕರ ಪ್ರಶಸ್ತಿಗೆ ಈ ಬಾರಿ ರಂಗನಟ ನವೀನ್ ಡಿ. ಪಡೀಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರತಿಷ್ಠಾನದ ಅಧ್ಯಕ್ಷ ಕೆ.ಗೋಪಾಲಕೃಷ್ಣ ಶೆಟ್ಟಿ, ‘ಮೇ 3ರಂದು ಸಂಜೆ 5.30ಕ್ಕೆ ನಗರದ ಕೆನರಾ ಪದವಿಪೂರ್ವ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ’ ಎಂದರು.

ಕಿರುತೆರೆ, ತುಳು ಮತ್ತು ಕನ್ನಡ ರಂಗಭೂಮಿ, ಚಲನಚಿತ್ರದಲ್ಲಿ ನವೀನ್ ಮಾಡಿರುವ ಸಾಧನೆಯನ್ನು ಪರಿಗಣಿಸಿ ಸಾಹಿತಿ ನಾ. ದಾಮೋದರ ಶೆಟ್ಟಿ ನೇತೃತ್ವದ ಆಯ್ಕೆ ಸಮಿತಿಯು ನವೀನ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ರಂಗಕರ್ಮಿ ದಿವಂಗತ ಭಾಸ್ಕರ ನೆಲ್ಲಿತೀರ್ಥ ಸ್ಮರಣೆಯಲ್ಲಿ ನೀಡುವ ಪ್ರಶಸ್ತಿಯನ್ನು ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿಸಿದ್ದಾರೆ ಎಂದರು.

ADVERTISEMENT

ಶಾರದಾ ಸೇವಾ ಸಮಿತಿ ಸಹಯೋಗದಲ್ಲಿ ದಿ.ಪಣಂಬೂರು ಜನಾರ್ದನ ರಾವ್ ಸ್ಮರಣಾರ್ಥ ನೀಡುವ ವಾರ್ಷಿಕ ರಂಗ ಪ್ರಶಸ್ತಿಯನ್ನು ನಟಿ ಸಾವಿತ್ರಿ ಶ್ರೀನಿವಾಸ ರಾವ್ ಅವರಿಗೆ ನೀಡಲಾಗುತ್ತದೆ. ಸಭಾ ಕಾರ್ಯಕ್ರಮದ ನಂತರ ರಂಗಸಂಗಾತಿ ಬಳಗದಿಂದ ಶಶಿರಾಜ್ ಕಾವೂರು ನಿರ್ದೇಶನದ ‘ನೆಮ್ಮದಿ ಅಪಾರ್ಟ್‌ಮೆಂಟ್ ಬ್ಲಾಕ್ ಬಿ’ ಕನ್ನಡ ನಾಟಕ ಪ್ರದರ್ಶನಗೊಳ್ಳಿದೆ. ಇದು ಜನಮನ ಗೆದ್ದ ‘ನೆಮ್ಮದಿ ಅಪಾರ್ಟ್‌ಮೆಂಟ್ ಫ್ಲಾಟ್ ನಂಬರ್ 252’ ನಾಟಕದ ಮುಂದುವರಿದ ಭಾಗವಾಗಿದೆ ಎಂದು ಹೇಳಿದರು.

ರಂಗಸಂಗಾತಿ ಸದಸ್ಯರಾದ ಸುರೇಶ್ ಬೆಳ್ಚಡ ಕೊಳಂಬೆ, ಚಂದ್ರಶೇಖರ ಕೂಳೂರು, ರಂಜನ್ ಬೋಳೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.