ಪುತ್ತೂರು: ಎನ್ಎಸ್ಎಸ್ ಶಿಬಿರಗಳಿಂದ ವಿದ್ಯಾರ್ಥಿಗಳಿಗೆ ಶ್ರಮದ ಬೆಲೆ ತಿಳಿಯುತ್ತದೆ. ಜೀವನದ ಅನುಭವ ಪಡೆದಾಗ ಮಾತ್ರ ಜೀವನ ಮೌಲ್ಯಗಳ ಬಗ್ಗೆ ತಿಳಿಯುತ್ತದೆ. ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿಯನ್ನು ಹೊಂದಿದಾಗ ಮಾತ್ರ ಅವರು ನಿಜವಾದ ಮಾನವರಾಗಲು ಸಾಧ್ಯ ಎಂದು ಪ್ರಾಂಶುಪಾಲ ಆ್ಯಂಟನಿ ಪ್ರಕಾಶ್ ಮೊಂತೊರೊ ಹೇಳಿದರು.
ಬಿಳಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏ.28ರಿಂದ ಮೇ 4ರ ವರೆಗೆ ನಡೆಯಲಿರುವ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂತ ಫಿಲೋಮಿನಾ ಕಾಲೇಜು ಕಳೆದ ಆರು ದಶಕಗಳಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ಭಾರತೀಯ ಕಲೆಗಳ ಬಗ್ಗೆ ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಬಿಳಿಯೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ನಳಿನಿ ಅವರು ಉದ್ಘಾಟಿಸಿದರು. ಕಾಲೇಜಿನ ಉಪಪ್ರಾಂಶುಪಾಲ ವಿಜಯ ಕುಮಾರ್ ಎಂ., ಗ್ರಾಮ ಪಂಚಾಯಿತಿ ಸದಸ್ಯ ತನಿಯಪ್ಪ ಪೂಜಾರಿ, ಶಾಲೆ ಮುಖ್ಯ ಶಿಕ್ಷಕಿ ಶೀಲಾ ಡಯಾನಾ ಮೊರಾಸ್ ಮಾತನಾಡಿದರು.
ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಗೌಡ, ಸಹಾಯಕ ಪ್ರಾಧ್ಯಾಪಕ ಅಭಿಷೇಕ್ ಸುವರ್ಣ, ಕಾಲೇಜಿನ ಹಿರಿಯ ವಿದ್ಯಾರ್ಥಿ ಪೊನ್ನಪ್ಪ, ಸಹ ಶಿಬಿರಾಧಿಗಳಾದ ಧನ್ಯ ಪಿ.ಟಿ., ಚೈತ್ರಾ ಭಾಗವಹಿಸಿದ್ದರು. ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ವಾಸುದೇವ ಎನ್.ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಷ್ಪಾ ಎನ್. ವಂದಿಸಿದರು. ಎನ್ಎಸ್ಎಸ್ ಕಾರ್ಯದರ್ಶಿ ವೈಷ್ಣವಿ ಕೆ.ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.