ಉಳ್ಳಾಲ: ಬಾಡಿಗೆ ನೀಡದೆ ನಾಲ್ಕು ತಿಂಗಳಿನಿಂದ ಮನೆಯಲ್ಲೇ ಉಳಿದಿದ್ದ ಕುಟುಂಬದ ಮೇಲೆ ಮನೆ ಮಾಲೀಕ ಸೇರಿದ ತಂಡ ಹಲ್ಲೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಬ್ಬುಕಟ್ಟೆ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಮೂಲತಃ ನಾಟೆಕಲ್ ನಿವಾಸಿ ಬಶೀರ್ (44) ಹಲ್ಲೆಗೊಳಗಾದವರು. ಹಲ್ಲೆ ತಡೆಯಲು ಬಂದ ಅವರ ಪತ್ನಿ ನಸೀಮಾ (34), ಪುತ್ರ ಮುಹಮ್ಮದ್ ತಸ್ಲಾಲ್ (10) ಹಾಗೂ ಪುತ್ರಿ ಝಕಿಯಾ (9) ಮೇಲೂ ತಂಡ ಹಲ್ಲೆ ನಡೆಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಹಲ್ಲೆಗೊಳಗಾದವರು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆ ಮಾಲೀಕರ ಪುತ್ರ ಸಮೀರ್ ಹಾಗೂ ಬದ್ರುದ್ದೀನ್, ಕುಞಿಮೋನು, ಹನೀಫ್ ಸೇರಿಕೊಂಡು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.
10 ತಿಂಗಳಿನಿಂದ ಬಶೀರ್ ಮತ್ತು ಕುಟುಂಬ ಬಬ್ಬುಕಟ್ಟೆಯಲ್ಲಿರುವ ಸಮೀರ್ ಎಂಬುವರ ಬಾಡಿಗೆ ಮನೆಯಲ್ಲಿದ್ದರು. ಮೂರು ತಿಂಗಳ ಬಾಡಿಗೆ ₹ 33 ಸಾವಿರ ಬಾಕಿ ಇರಿಸಿದ್ದರು. ನಿಗದಿತ ದಿನಾಂಕದ ಒಳಗೆ ಹಣ ನೀಡುವುದಾಗಿ ಉಳ್ಳಾಲ ಪೊಲೀಸ್ ಠಾಣೆಯಲ್ಲೂ ಬಶೀರ್ ಒಪ್ಪಿಕೊಂಡಿದ್ದರು. ಆದರೆ ದಿನ ಮುಂದೂಡಿ ₹ 11 ಸಾವಿರ ಮಾತ್ರ ನೀಡಿ, ಮತ್ತೆ ಅದೇ ಮನೆಯಲ್ಲಿ ಬಶೀರ್ ಕುಟುಂಬ ನೆಲೆಸಿತ್ತು. ಹಲ್ಲೆಗೊಳಗಾದವರು ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.