ಪುತ್ತೂರು: ‘ಅಡಿಕೆ ಕೃಷಿ ನಾಶವಾದರೆ ಮತ್ತು ಧಾರಣೆ ಕುಸಿದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರು ಸಂಕಷ್ಟಕ್ಕೊಳಬೇಕಾಗುತ್ತದೆ. ನಿಟ್ಟಿನಲ್ಲಿ ಅಡಿಕೆ ಬೆಳೆಗೆ ಬಾಧಿಸುವ ರೋಗಗಳ ಕುರಿತು ಮತ್ತು ಅಡಿಕೆಯ ಪರ್ಯಾಯ ಉಪಯೋಗದ ಕುರಿತು ಸಂಶೋಧನೆಗಳು ನಡೆಯುವ ಅಗತ್ಯವಿದೆ. ಈ ಕೆಲಸ ಆಗದಿದ್ದರೆ ಅಡಿಕೆಗೆ ಭವಿಷ್ಯವಿಲ್ಲ’ ಎಂದು ಶಾಸಕ ಅಶೋಕ್ಕುಮಾರ್ ರೈ ಹೇಳಿದರು.
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಂಗಳೂರು ಕೃಷಿಕರ ಸಹಕಾರಿ ಸಂಘದ ವತಿಯಿಂದ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ಸಹಕಾರದೊಂದಿಗೆ ಆರಂಭಿಸಲಾದ ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಯಾಂಪ್ಕೋ, ಮಾಸ್ ಸಹಕಾರಿ ಸಂಘಗಳ ಜತೆಗೆ ಕೃಷಿ ಪತ್ತಿನ ಸಹಕಾರಿ ಸಂಘಗಳು ಕೂಡ ಅಡಿಕೆ ಖರೀದಿ ಮಾಡುವಲ್ಲಿ ಪೈಪೋಟಿ ನೀಡುವಂತಾದರೆ ರೈತರಿಗೆ ನ್ಯಾಯಯುತ ಬೆಲೆ ಸಿಗುವುದರ ಜತೆಗೆ ಅಡಿಕೆ ಬೆಳೆ ಲಾಭದಾಯಕ
ವಾಗಬಹುದು’ ಎಂದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ಬಾಲ್ಯೋಟ್ಟು ಮಾತನಾಡಿ, ‘ಸೀತಾರಾಮ ರೈ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿದ ಅತ್ಯಲ್ಪ ಕಾಲದಲ್ಲೇ ಮಾಸ್ ಸಂಸ್ಥೆ ಅಭಿವೃದ್ಧಿಯತ್ತ ಸಾಗಿದೆ. ಹಣದ ಕೊರತೆಯನ್ನು ನೀಗಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಅಡಿಕೆ ಬೆಳೆಗಾರರಿಗೆ ಪ್ರಯೋಜನವಾಗಬೇಕಾದರೆ ಮಾರುಕಟ್ಟೆ ಪೈಪೋಟಿ ಇರಬೇಕು’ ಎಂದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳೆಜ್ಜ ಮಾತನಾಡಿ, ‘ಹಳೆದಿ ರೋಗ, ನುಸಿ ರೋಗ ಇತ್ಯಾದಿ ರೋಗಳಿಂದಾಗಿ ಈ ಭಾಗದ, ಮುಖ್ಯವಾಗಿ ಸುಳ್ಯ ಕಡೆಯ ಅಡಿಕೆ ಕೃಷಿಕರು ಕಂಗಾಲಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅಡಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರ ಬದುಕು ಕಷ್ಟಕರವಾಗಲಿದ್ದು, ಅಡಿಕೆ ಧಾರಣೆಯಲ್ಲಿ ಸ್ಥಿರತೆ ಕಾಪಾಡುವ ಕೆಲಸವೂ ಆಗಬೇಕಿದೆ’ ಎಂದರು.
ಕಾವು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಅಧ್ಯಕ್ಷತೆ ವಹಿಸಿದ್ದರು. ಅರಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಮಾಸ್ ಸಂಸ್ಥೆಯ ನಿರ್ದೇಶಕ ಎಂ.ಬಿ.ನಿತ್ಯಾನಂದ ಮುಂಡೋಡಿ, ಕೃಷಿಕರಾದ ಭಾಸ್ಕರ ರೈ ಕಂಟ್ರಮಜಲು, ಶರತ್ಕುಮಾರ್ ರೈ, ಸೀತಾರಾಮ ಭಟ್ ಬರಕ್ಕೆರೆ ಮಾತನಾಡಿದರು. ಮಾಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಸೀತಾರಾಮ ರೈ ಅವರನ್ನು ಕಾವು ಸಿಎ ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.
ಮಾಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಮಹಾಬಲೇಶ್ವರ ಭಟ್, ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ.ಎಂ.ಲೋಕೇಶ್, ನಿದೇಶಕರಾದ ಬೆಳ್ಳೆ ಶಿವಾಜಿ ಎಸ್.ಸುವರ್ಣ, ಸುಧಾ ಎಸ್.ರೈ ಪುಣ್ಚಪ್ಪಾಡಿ, ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಪುಷ್ಪರಾಜ ಅಡ್ಯಂತಾಯ ಮಂಚಿ ಮತ್ತಿತರರು ಇದ್ದರು.
ಮಾಸ್ ಸಂಸ್ಥೆಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಸ್ವಾಗತಿಸಿದರು. ಕಾವು ಸಿಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ವಂದಿಸಿದರು. ಸವಣೂರು ಸಿ.ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಮತ್ತು ಕಾವು ಸಿಎ ಬ್ಯಾಂಕ್ ಸಿಬ್ಬಂದಿ ಸುನಿಲ್ ನಿರೂಪಿಸಿದರು.
ಅಡಿಕೆ ಖರೀದಿಗೆ ಟ್ರೈನಿಗಳ ನೇಮಕ
ಮಾಸ್ ಸಂಸ್ಥೆ ಕಳೆದ ಸಾಲಿನಲ್ಲಿ ₹167 ಕೋಟಿಯ ವ್ಯವಹಾರ ನಡೆಸಿದೆ.ಈ ವ್ಯವಹಾರವನ್ನು ದ್ವಿಗುಣಗೊಳಿಸುವ ಉದ್ದೇಶವಿದೆ. ಸುಳ್ಯದಲ್ಲಿ ಮುಚ್ಚಲಾಗಿದ್ದ ಅಡಿಕೆ ಸಂಸ್ಕರಣಾ ಘಟಕವನ್ನು ಮತ್ತೆ ಸುಸಜ್ಜಿತಗೊಳಿಸಿ ಈ ಭಾಗದ ಅಡಿಕೆಯನ್ನು ಇಲ್ಲೇ ಸಂಸ್ಕರಣೆ ಮಾಡುವ ವ್ಯವಸ್ಥೆಗಳು ಆಗುತ್ತಿವೆ. ಅಡಿಕೆ ಖರೀದಿ ಮಾಡುವ ಬಗ್ಗೆ ಪದವೀಧರ ಅಭ್ಯರ್ಥಿಗಳನ್ನು ₹13 ಸಾವಿರ ಸ್ಪೈಪೆಂಡ್ ಸಹಿತ ಟ್ರೈನಿಗಳಾಗಿ ಸೇರಿಸಿ ತರಬೇತಿ ನೀಡಿ ಅವರನ್ನು ಖರೀದಿ ಅಧಿಕಾರಿಗಳನ್ನಾಗಿ ನೇಮಕ ಮಾಡುವ ಪ್ರಕ್ರಿಯೆಗಳು ಆರಂಭಗೊಂಡಿವೆ. ಬೇಡಿಕೆ ಮುಂದಿಡುವ ಸಹಕಾರಿ ಸಂಸ್ಥೆಗಳಲ್ಲಿ ಮುಂದಿನ ದಿನಗಳಲ್ಲಿ ಅಡಿಕೆ ಖರೀದಿ ಕೇಂದ್ರ ತೆರೆಯಲಾಗುವುದು ಎಂದು ಮಾಸ್ ಸಂಸ್ಥೆಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.