ಕಾಸರಗೋಡು: ಜಿಲ್ಲೆಯ ವಿವಿಧೆಡೆ ಸೋಮವಾರ ನಡೆದ ಪ್ರತ್ಯೇಕ ವಾಹನ ಅಪಘಾತ ಪ್ರಕರಣಗಳಲ್ಲಿ ಒಬ್ಬ ಮೃತಪಟ್ಟು, ಹಲವರಿಗೆ ಗಾಯಗಳಾಗಿವೆ.
ಕೊವ್ವಲ್ ಪಳ್ಳಿ ಎಂಬಲ್ಲಿ ಬೈಕ್ ಮತ್ತು ಕಾರು ಡಿಕ್ಕಿಯಾಗಿ, ಬೈಕ್ ಸವಾರ ಚಿರಪುರ ಆಲಿನ್ ಕೀಳ್ ನಿವಾಸಿ ಟಿ.ಕಿಶೋರ್ (19) ಮೃತಪಟ್ಟಿದ್ದಾರೆ.
ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಪೇಂಟಿಂಗ್ ಕಾರ್ಮಿಕರಾಗಿದ್ದ ಅವರು, ರಘು-ದಿವ್ಯಾ ದಂಪತಿ ಪುತ್ರ.
ಇನ್ನೊಂದು ಪ್ರಕರಣದಲ್ಲಿ ಕುಂಬಳೆ ಭಾಸ್ಕರನಗರದಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿಯಾಗಿ 5 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬೋವಿಕ್ಕಾನ ನಿವಾಸಿಗಳಾದ ಸಾದತ್ (36), ಬದ್ರುದ್ದೀನ್ (27), ರುಖಿಯಾ (30), ಆಯಿಷಾ (40) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೊಂದು ಘಟನೆಯಲ್ಲಿ ಪೇರಾಲ್ನಲ್ಲಿ ಖಾಸಗಿ ಬಸ್ ಮತ್ತು ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್ ಸವಾರ, ಸ್ಥಳೀಯ ನಿವಾಸಿ ಸಿರಾಜ್ (37) ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತ್ರಿನ್ನಾಡಿನಲ್ಲಿ 2 ಕಾರುಗಳು ಅಪಘಾತಕ್ಕೀಡಾಗಿ ಮಕ್ಕಳ ಸಹಿತ 9 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಸರಗೋಡು: ಬಾಲಕಿ ಮೇಲೆ ಲೈಂಗಿಕ ಅಪರಾಧ ನಡೆಸಿದ ಪ್ರಕರಣದಲ್ಲಿ ದೇಲಂಪಾಡಿ ಚಾಮನಡ್ಕ ನಿವಾಸಿ, ಮುಹಮ್ಮದ್ (60) ಎಂಬಾತನಿಗೆ ಕಾಸರಗೋಡು ತ್ವರಿತ ಗತಿ ವಿಶೇಷ ನ್ಯಾಯಾಲಯ (ಪೊಕ್ಸೊ) 11 ವರ್ಷ ಸಜೆ ಮತ್ತು ₹ 43 ಸಾವಿರ ದಂಡ ವಿಧಿಸಿದೆ. ದಂಡ ಪಾವತಿಸದೆ ಇದ್ದರೆ ಹೆಚ್ಚುವರಿ 10 ತಿಂಗಳ ಸಜೆ ವಿಧಿಸಿ ತೀರ್ಪು ನೀಡಲಾಗಿದೆ. 2019ರ ಆಗಸ್ಟ್ನಲ್ಲಿ ಘಟನೆ ನಡೆಸಿದ್ದು, ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಕಾಸರಗೋಡು: ಉಳಿಯತ್ತಡ್ಕ ರಹಮತ್ ನಗರದ ಕ್ವಾರ್ಟರ್ಸ್ ನಿವಾಸಿ ಷಿಹಾಬ್-ಆಯಿಷಾ ದಂಪತಿ ಪುತ್ರಿ ಷಂಸೀರಾ (17) ಎಂಬಾಕೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರ ಪೊಲೀಸರು ಮಹಜರು ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.