ಮಂಗಳೂರು: ಶ್ರೀದೇವಿ ನೃತ್ಯ ಕೇಂದ್ರದ ವಾರ್ಷಿಕ ನೃತ್ಯೋತ್ಸವ, ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆ, ಶಾಂತಲಾ ಪ್ರಶಸ್ತಿ ಪುರಸ್ಕೃತ ನೃತ್ಯ ಕಲಾವಿದೆ ದಿ.ಜಯಲಕ್ಷ್ಮಿ ಆಳ್ವ ಸ್ಮರಣೆಯ ‘ಜಯಕಲಾ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಅ.25ರಂದು ನಗರದ ಡಾನ್ಬಾಸ್ಕೊ ಸಭಾಭವನದಲ್ಲಿ ನಡೆಯಲಿದೆ ಎಂದು ನೃತ್ಯ ಕೇಂದ್ರದ ನಿರ್ದೇಶಕಿ ಆರತಿ ಶೆಟ್ಟಿ ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಭಾರತೀಯ ನೃತ್ಯ ಪ್ರವರ್ತಕ ಪ್ರೊ. ಮೋಹನ್ ಖೋಕರ್ ಅವರ ಶತಮಾನೋತ್ಸವದ ನೆನಪಿನಲ್ಲಿ ಕಿರುಚಿತ್ರ ‘ಪ್ರೊ. ಮೋಹನ್ ಖೋಕರ್’ ಪ್ರದರ್ಶನ, ಕಥಕ್ ನೃತ್ಯ ಸಾಧಕಿ ವಿಧಿ ನಗರ್ ವಾರಣಾಸಿ ಅವರ ನೃತ್ಯ, ನೃತ್ಯ ಕೇಂದ್ರದ ವಿದ್ಯಾರ್ಥಿಗಳಿಂದ ‘ಕೃಷ್ಣ ಪ್ರಾಣ’ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ’ ಎಂದರು.
ಬೆಳಿಗ್ಗೆ 10 ಗಂಟೆಗೆ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಯನ್ನು ಪ್ರೊ. ಆಶಿಷ್ ಖೋಕರ್ ಉದ್ಘಾಟಿಸುವರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು. ದೇಶದ ವಿವಿಧ ಭಾಗಗಳ 30ಕ್ಕೂ ಹೆಚ್ಚು ನೃತ್ಯಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ನೃತ್ಯಗುರು ಉಳ್ಳಾಲ ಮೋಹನಕುಮಾರ್ ಅವರು ವಿಧಿ ನಗರ್ ಅವರಿಗೆ ಜಯಕಲಾ ಪ್ರಶಸ್ತಿ ಪ್ರದಾನ ಮಾಡುವರು ಎಂದರು.
ಹರಿಕೃಷ್ಣ ಪುನರೂರು, ಪ್ರದೀಪಕುಮಾರ್ ಕಲ್ಕೂರ್, ಹರೀಶ್ ಶೆಟ್ಟಿ, ಸಾತ್ವಿಕಾ ರೈ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.