ಮಂಗಳೂರು: ಭಾರಿ ವಾಹನಗಳಲ್ಲಿ ಕರ್ಕಶ ಹಾರ್ನ್ ತೆರವುಗೊಳಿಸಲು ನಗರ ಪೊಲೀಷ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸರು ಬುಧವಾರ ವಿಶೇಷ ಅಭಿಯಾನ ನಡೆಸಿದರು. ಈ ಅಭಿಯಾನದಲ್ಲಿ ಒಟ್ಟು 160 ವಾಹನಗಳ ಕರ್ಕಶ ಹಾರ್ನ್ಗಳನ್ನು ತೆರವುಗೊಳಿಸಲಾಗಿದೆ.
‘ವಾಹನಗಳು ಕರ್ಕಶ ಹಾರ್ನ್ ಬಳಸುವುದರಿಂದ ಅನಾರೋಗ್ಯ ಪೀಡಿತರು, ವಯಸ್ಸಾದವರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಈ ಬಗ್ಗೆ ನಮಗೆ ಪದೇ ಪದೇ ದೂರುಗಳು ಬಂದಿದ್ದವು. ವಾಹನ ಚಾಲಕರಿಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಅವರು ಕರ್ಕಶ ಹಾರ್ನ್ ಬಳಕೆ ನಿಲ್ಲಿಸಿರಲಿಲ್ಲ. ಹಾಗಾಗಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನಾಲ್ಕು ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬುಧವಾರ ವಿಶೇಷ ಅಭಿಯಾನ ನಡೆಸಿ ಇಂತಹ ಹಾರ್ನ್ಗಳನ್ನು ಕಿತ್ತು ಹಾಕಿದ್ದೇವೆ’ ಎಂದು ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕರ್ಕಶ ಹಾರ್ನ್ ಕಿತ್ತುಹಾಕುವುದರ ಜೊತೆಗೆ, ಅದನ್ನು ಬಳಸಿದ ವಾಹನಗಳಿಗೆ ತಲಾ ₹ 500 ದಂಡ ವಿಧಿಸಿದ್ದೇವೆ. ಅವರು ಈ ಚಾಳಿ ಮುಂದುವರಿಸಿದರೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.