ಮಂಗಳೂರು: ನಗರದ ಕಾವೂರು ಠಾಣಾ ವ್ಯಾಪ್ತಿಯ 'ದಿಯಾ ಸಿಸ್ಟಮ್ಸ್ ಸಾಫ್ಟ್ವೇರ್ ಕಂಪನಿ’ಯ ಹೊರಗುತ್ತಿಗೆ ಚಾಲಕನೊಬ್ಬನಿಗೆ ಹಲ್ಲೆ ನಡೆಸಿದ ಆರೋಪದ ಮೇರೆಗೆ, ಅದೇ ಸಂಸ್ಥೆಯ ಇನ್ನೊಬ್ಬ ಹೊರಗುತ್ತಿಗೆ ಚಾಲಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
‘ಕಾವೂರಿನ ಸಂದೀಪ್ ಹಲ್ಲೆಗೊಳಗಾದ ಚಾಲಕ. ಅದೇ ಕಂಪನಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರು ಚಾಲಕನಾಗಿದ್ದ ಶಕ್ತಿನಗರದ ತೇಜಸ್ ಶೆಟ್ಟಿ (30), ಆತನ ಸೋದರ ಭವಿತ್ ಶೆಟ್ಟಿ (26), ಉರ್ವ ಅಶೋಕನಗರದ ಪ್ರೀತಮ್ (40) ಹಾಗೂ ಬೋಂದೆಲ್ನ ದೀಕ್ಷಿತ್ (40) ಬಂಧಿತ ಆರೋಪಿಗಳು. ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಗುರಾಯಿಸಿ ನೋಡಿದ ಕಾರಣಕ್ಕೆ ತೇಜಸ್ ಶೆಟ್ಟಿ ಹಾಗೂ ಸಂದೀಪ್ ನಡುವೆ ಬುಧವಾರ ರಾತ್ರಿ ಜಗಳವಾಗಿತ್ತು. ತನ್ನ ಪಾಳಿಯ ಕೆಲಸ ಮುಗಿಸಿ ತೆರಳುತ್ತಿದ್ದ ಸಂದೀಪ್ ಮೇಲೆ ತೇಜಸ್ ಶೆಟ್ಟಿ ಹಾಗೂ ಇತರ ಮೂವರು ಆರೋಪಿಗಳು ಸೇರಿ ಮಾರಕ ಆಯುಧದಿಂದ ಹಲ್ಲೆ ನಡೆಸಿದ್ದರು. ಸಂದೀಪ್ ಅವರ ತಲೆ ಮತ್ತಿತರ ಭಾಗಗಳಿಗೆ ಗಂಭೀರವಾದ ಗಾಯಗಳಾಗಿದ್ದು, ಅವರು ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.