ಮಂಗಳೂರು: ಮುಕ್ಕದಲ್ಲಿರುವ ಶ್ರೀನಿವಾಸ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆ ಆಯೋಜಿಸಿರುವ ರಾಷ್ಟ್ರಮಟ್ಟದ ಸಾಂಸ್ಕೃತಿಕ, ಕ್ರೀಡಾ ಮತ್ತು ತಾಂತ್ರಿಕ ಹಬ್ಬ ‘ಟೆಕ್ ಯುವ’ ಇದೇ 26 ಮತ್ತು 27ರಂದು ಕಾಲೇಜಿನ ಆವರಣದಲ್ಲಿ ನಡೆಯಲಿದೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಡೀನ್ ಥಾಮಸ್ ಪಿಂಟೊ, ಕರ್ನಾಟಕ, ಗೋವಾ ಮತ್ತು ತಮಿಳುನಾಡಿನ 40 ಎಂಜಿನಿಯರಿಂಗ್ ಕಾಲೇಜುಗಳಿಂದ 3500ಕ್ಕೂ ಅಧಿಕ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಎಥ್ನೊಟೆಕ್ ಅಕಾಡೆಮಿಕ್ ಸೊಲ್ಯೂಷನ್ಸ್ನ ಸಿಇಒ ಕಿರಣ್ ಕೆ.ರಾಜಣ್ಣ ಮಂಗಳೂರಿನ ನೋವಿಗೊ ಸೊಲ್ಯೂಷನ್ಸ್ನ ಸಿಇಒ ಪ್ರವೀಣ ಕಲ್ಭಾವಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.
ಟೆಕ್ ಯುವ ಸಂಚಾಲಕ ಶ್ರೀನಾಥ್ ರಾವ್ ಮಾತನಾಡಿ ಕೃತಕ ಬುದ್ದಿಮತ್ತೆ (ಎಐ), ಬೈನಲ್ ಬ್ಯಾಟಲ್, ತಾಂತ್ರಿಕ ಮಾತುಕತೆ ಮುಂತಾದ ಬಗೆಬಗೆಯ ಸ್ಪರ್ಧೆಗಳು ಮೊದಲ ದಿನ ನಡೆಯಲಿದ್ದು ಸಾಂಸ್ಕೃತಿಕ ಚಟುವಟಿಕೆ ಎರಡನೇ ದಿನ ನಡೆಯಲಿದೆ. ಎರಡೂ ದಿನ ಕ್ರೀಡಾ ಸ್ಪರ್ಧೆಗಳು ಇರುತ್ತವೆ ಎಂದರು.
28ರಂದು ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಮಾತ್ರ ‘ಕಲಾಸ್ಪಂದನ’ ಕಾರ್ಯಕ್ರಮ ಆಯೋಜಿಸಲಾಗಿದ್ದು ಭರತನಾಟ್ಯ ಕಲಾವಿದ ಶ್ರೀಧರ್ ಹೊಳ್ಳ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಎ.ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸುವರು ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.