ಮಂಗಳೂರು: ನಗರದ ಸೇಂಟ್ ಜೋಸೆಫ್ಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ 18ನೇ ಪದವಿ ಪ್ರದಾನ ಸಮಾರಂಭದಲ್ಲಿ ಒಟ್ಟು 731 ವಿದ್ಯಾರ್ಥಿಗಳಿಗೆ ಜೆಐಎಸ್ ವಿಶ್ವವಿದ್ಯಾಲಯದ ಸಹಕುಲಪತಿ ನೀರಜ್ ಸಕ್ಸೆನಾ ಪದವಿ ಪ್ರಮಾಣಪತ್ರ ವಿತರಿಸಿದರು.
2023ನೇ ಸಾಲಿನ 531 ವಿದ್ಯಾರ್ಥಿಗಳು ಬಿಇ ಪದವಿಯನ್ನು ಮತ್ತು ಒಟ್ಟು 200 ಸ್ನಾತಕೋತ್ತರ ಪದವೀಧರರು ಎಂಬಿಎ, ಎಂಸಿಎ ಮತ್ತು ಪಿಎಚ್.ಡಿ ಪದವಿ ಪ್ರಮಾಣಪತ್ರ ಸ್ವೀಕರಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ನೀರಜ್ ಸಕ್ಸೇನಾ, ‘ಬದುಕಿನಲ್ಲಿ ನಿಷ್ಪಕ್ಷಪಾತ ದೃಷ್ಟಿಕೋನ ಮತ್ತು ಪರಿಶ್ರಮ ಮುಖ್ಯ. ತಮ್ಮ ಕನಸುಗಳನ್ನು ಪೋಷಿಸಬೇಕು. ಸವಾಲುಗಳನ್ನು ಎದುರಿಸುವ ಛಾತಿ ಬೆಳೆಸಿಕೊಳ್ಳಬೇಕು’ಎಂದರು.
ಮೈಕ್ರೊಸಾಫ್ಟ್ನ ಬೆಂಗಳೂರು ವಿಭಾಗದ ಕ್ಲೌಡ್ ಸಲ್ಯೂಷನ್ ಆರ್ಕಿಟೆಕ್ಟ್ ಮ್ಯಾನೇಜರ್ ಐರೊಲ್ ಮೆಲಿಶಾ ಪಿಂಟೊ, ‘ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕ ಪರಿಣಾಮವನ್ನು ಸೃಷ್ಟಿಸಲು ಮತ್ತು ಶ್ರೇಷ್ಠತೆಯನ್ನು ಸಾಧಿಸಲು ಜ್ಞಾನವನ್ನೇ ಶಕ್ತಿಯನ್ನಾಗಿ ಬಳಸಿಕೊಳ್ಳಬೇಕು. ಸುಸ್ಥಿರ ಅಭಿವೃದ್ಧಿ ಪ್ರಯತ್ನಗಳಲ್ಲಿ ನಿರತವಾಗಬೇಕು.ಗುರಿ ಸಾಧಿಸಲು ವಿನಮ್ರತೆ ಹಾಗೂ ಸವಾಲುಗಳನ್ನು ಎದುರಿಸುವ ಧೈರ್ಯ ಸದಾ ಜೊತೆಗಿರಲಿ’ ಎಂದರು.
ಮಂಗಳೂರಿನ ಬಿಷಪ್ ಹಾಗೂ ಎಸ್ಜೆಇಸಿ ಅಧ್ಯಕ್ಷ ಪೀಟರ್ ಪೌಲ್ ಸಲ್ಡಾನ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ನಿರ್ದೇಶಕರಾದ ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ರಮಾನಂದ ಎಚ್. ವಿ ಅತಿಥಿಗಳನ್ನು ಪರಿಚಯಿಸಿದರು. ರಿಯೊ ಡಿಸೋಜ ಪ್ರಮಾಣ ವಚನ ಬೋಧಿಸಿದರು. ಅಕ್ಷತಾ ಮತ್ತು ಮಹಮ್ಮದ್ ಕೈಫ್ ಕಾಲೇಜು ಜೀವನದ ಅನುಭವ ಹಂಚಿಕೊಂಡರು.
‘ಪ್ರತಿಭಾನ್ವಿತರಿಗೆ ಮತ್ತು ಕ್ರೀಡಾ ಸಾಧಕರಿಗೆ ಪೀಟರ್ ಪೌಲ್ ಸಲ್ಡಾನ ಅವರು ಪ್ರಶಸ್ತಿ ಪ್ರದಾನ ಮಾಡಿದರು. ’ಎರಡೇ ವರ್ಷಗಳಲ್ಲಿ ಕೃತಕ ಬುದ್ಧೀಮತ್ತೆ ಮತ್ತು ಚಾಟ್ ಜಿಪಿಟಿ ಜಗತ್ತನ್ನು ಪರಿವರ್ತಿಸಿವೆ. ನಮ್ಮ ಕೊಡುಗೆಗಳು ದೇಶವನ್ನು ಮುಂದಕ್ಕೆ ಕೊಂಡೊಯ್ಯುವುದಕ್ಕೆ ನೆರವಾಗಬೇಕು’ ಎಂದರು.
ಎಸ್ಜೆಇಸಿಯ ಸಹಾಯಕ ನಿರ್ದೇಶಕ ಫಾ. ಕೆನಿತ್ ಕ್ರಾಸ್ತ, ಉಪಪ್ರಾಂಶುಪಾಲ ಪುರುಷೋತ್ತಮ ಚಿಪ್ಪಾರ್, ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ರಾಕೇಶ್ ಲೋಬೊ ಮತ್ತು ರಮ್ಯಾ ಎಂ. ಭಾಗವಹಿಸಿದ್ದರು. ಮಂಜುನಾಥ್ ಬಿ ವಂದಿಸಿದರು. ಪ್ರೀತಾ ಡಿಸೋಜ ಮತ್ತು ಡೆವರ್ ಜೋನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.