ಮಂಗಳೂರು: ವಿದ್ಯಾರ್ಥಿಗಳಲ್ಲಿ ತಾಂತ್ರಿಕ ನಾವೀನ್ಯತೆಯನ್ನು ಗುರುತಿಸುವ ಮನೋಭಾವ ಮೂಡಿಸುವ ಉದ್ದೇಶದಿಂದ ನಗರದ ಸೇಂಟ್ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆ ಆಯೋಜಿಸಿದ್ದ ಎರಡು ದಿನಗಳ ‘ಅಲೋಶಿಯಸ್ ಟೆಕ್ ಫೆಸ್ಟ್’ ಶನಿವಾರ ಮುಕ್ತಾಯಗೊಂಡಿತು.
ಫೆಸ್ಟ್ ಅಂಗವಾಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ತಾಂತ್ರಿಕ ಮಾದರಿಗಳನ್ನು ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ತರಬೇತುದಾರರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ಮಾದರಿಗಳು ಜ್ಞಾನ ಮತ್ತು ಸೃಜನಶೀಲತೆಗೆ ಕನ್ನಡಿ ಹಿಡಿದವು. ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿದ ಸಾರ್ವಜನಿಕರು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ತಮ್ಮ ಅರಿವನ್ನು ವಿಸ್ತರಿಸಿಕೊಂಡರು.
ಸಂಸ್ಥೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ ಪ್ರದರ್ಶನ ಫಲಕ ಅನಾವರಣಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪಿಕ್ಸೆಲ್ ಫಝಲ್ ಕ್ವೆಸ್ಟ್ ಉದ್ಘಾಟಿಸಲಾಯಿತು.
ತಾಂತ್ರಿಕವಾಗಿ ಮುಂದುವರಿಯುತ್ತಿರುವ ಪ್ರಸ್ತುತ ದಿನಗಳಲ್ಲಿ ಬಹು ಕೌಶಲಗಳನ್ನು ಗಳಿಸಿಕೊಳ್ಳುವುದು ಅಗತ್ಯ. ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಲಾಭ ಪಡೆದುಕೊಳ್ಳಲು ಪ್ರಯತ್ನಿಸಬೇಕು ಎಂದು ಪ್ರದೀಪ್ ಡಿಸೋಜ ಹೇಳಿದರು.
ಫಾದರ್ ಅಜಿತ್, ಉದ್ಯಮಿಗಳಾದ ರಾಜೇಶ್ ಕದ್ರಿ, ರಾಮಚಂದ್ರ ಭಟ್, ರಿಚರ್ಡ್ ಸಿರಿಲ್ ರಾಡ್ರಿಗಸ್, ಗ್ಲಾಡ್ಸನ್ ಡಿಸಿಲ್ವ, ಅರವಿಂದ್ ಪ್ರಭು, ಭಾರತಿ, ಎಂ.ಡಿ.ಪೂಜಾರಿ, ಸುಶಾನ್, ಬಾಲಕೃಷ್ಣ ಗಟ್ಟಿ, ಬಾಲಕೃಷ್ಣ, ಐವನ್ ಅಪೋಸ್, ಜೋಯೆಲ್ ಮೆನೇಜಸ್, ಜಾನ್ಸನ್ ಅಂತೋನಿ ರಾಜ್, ಸತೀಶ್, ಕೈಗಾರಿಕಾ ತರಬೇತಿ ಸಂಸ್ಥೆಯ ಉಪಪ್ರಾಂಶುಪಾಲ ಆಲ್ವಿನ್ ಮೆನೇಜಸ್, ತರಬೇತಿ ಅಧಿಕಾರಿ ನೋಯಲ್ ಲೋಬೊ, ಕಾರ್ಯಕ್ರಮದ ಸಂಚಾಲಕ ವಿಲ್ಸನ್ ಮತ್ತು ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಶಶಾಂಕ್ ಇದ್ದರು.
ಸಂಸ್ಥೆಯ ನಿರ್ದೇಶಕ ಫಾದರ್ ಜಾನ್ ಡಿಸೋಜ ಎಸ್.ಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ರೋಷನ್ ಡಿಸೋಜ ಸ್ವಾಗತಿಸಿದರು. ತರಬೇತಿ ಅಧಿಕಾರಿ ವಿಲ್ಸನ್ ಧನ್ಯವಾದ ಅರ್ಪಿಸಿದರು. ತರಬೇತಿ ಅಧಿಕಾರಿ ರಾಬಿನ್ ವಾಸ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.