ಮಂಗಳೂರು: ನಗರದ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರಿಗೆ ಮಾಹಿತಿ ನೀಡಿ ಗೊಂದಲ ಸೃಷ್ಟಿಸಿದ ಘಟನೆ ನಗರದಲ್ಲಿ ನಡೆದಿದೆ.
ಉಪ್ಪಿನಂಗಡಿಯ ಅರ್ಪಿಲ್ ನಿವಾಸಿಯೊಬ್ಬರನ್ನು (55 ವರ್ಷ) ಚಿಕಿತ್ಸೆ ಸಲುವಾಗಿ ವೆನ್ಲಾಕ್ ಆಸ್ಪತ್ರೆಗೆ ಶನಿವಾರ ದಾಖಲಿಸಲಾಗಿತ್ತು. ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯಿಂದ ಮಂಗಳೂರು ದಕ್ಷಿಣ ಠಾಣೆಗೆ ಭಾನುವಾರ ಮಾಹಿತಿ ರವಾನೆಯಾಗಿದೆ. ಆ ಠಾಣೆಯವರು ರೋಗಿಯ ಕುಟುಂಬದವರ ವಿಳಾಸ ಸಹಿತ ಧರ್ಮಸ್ಥಳ ಠಾಣೆಗೆ ಮಾಹಿತಿ ನೀಡಿದ್ದರು. ಧರ್ಮಸ್ಥಳ ಠಾಣೆಯ ಪೊಲೀಸರು ಆ ರೋಗಿಯ ಬಂಧುಗಳಿಗೆ ಮಾಹಿತಿ ನೀಡಿದ್ದರು. ರೋಗಿಯ ಬಂಧುಗಳು ಆಸ್ಪತ್ರೆಯ ಶವಾಗಾರಕ್ಕೆ ಬಂದು ನೋಡಿದಾಗ, ಅಂತಹ ವ್ಯಕ್ತಿ ಮೃತಪಟ್ಟಿಲ್ಲ ಎಂದು ಗೊತ್ತಾಗಿತ್ತು. ರೋಗಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದರಿಂದ ಅವರ ಬಂಧುಗಳು ನಿಟ್ಟುಸಿರು ಬಿಟ್ಟಿದ್ದರು.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ಠಾಣೆಯ ಅಧಿಕಾರಿಯೊಬ್ಬರು, ‘ಸಂವಹನದ ಸಂದರ್ಭದಲ್ಲಿ ಲೋಪವಾಗಿದ್ದರಿಂದ ಈ ಗೊಂದಲ ಉಂಟಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.