ಉಳ್ಳಾಲ: ಮಾಡೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಕೋಟೆಕಾರ್ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಮಾಲಿನಿ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಶಾಲೆಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿತು.
ಈ ಶಾಲೆಯ ಕಟ್ಟಡ ಶಿಥಿಲವಾಗಿರುವ ಹಾಗೂ ಚಾವಣಿ ಸೋರುತ್ತಿರುವ ಬಗ್ಗೆ ‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯಲ್ಲಿ ಪ್ರಕಟಗೊಂಡ ‘ಶಿಥಿಲಗೊಂಡ ಕಟ್ಟಡಗಳು– ಸರ್ಕಾರಿ ಶಾಲೆಗಳ ಅಳಲು’ ಎಂಬ ವಿಶೇಷ ವರದಿಯಲ್ಲಿ ಗಮನ ಸೆಳೆದಿತ್ತು.
‘ವಿದ್ಯಾರ್ಥಿಗಳು ಮಧ್ಯಾಹ್ನದ ಹೊತ್ತು ನೆಮ್ಮದಿಯಿಂದ ಕುಳಿತು ಊಟ ಮಾಡದಷ್ಟು ಶಾಲೆಯ ಕಟ್ಟಡ ಹದಗೆಟ್ಟಿದೆ. ಈ ಬಗ್ಗೆ ಶಾಲಾ ಉಸ್ತುವಾರಿ ಸಮಿತಿಯವರು ಗಮನಕ್ಕೆ ತಂದಿದ್ದಾರೆ. ಆದಷ್ಟು ತ್ವರಿತವಾಗಿ ಶಾಲಾ ಕಟ್ಟಡವನ್ನು ದುರಸ್ತಿಪಡಿಸಲು ಕ್ರಮವಹಿಸುವುದದಾಗಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯವರು ಭರವಸೆ ನೀಡಿದ್ದಾರೆ’ ಎಂದು ಪಟ್ಟಣ ಪಂಚಾಯಿತಿಯ ಮಾಡೂರು 3ನೇ ವಾರ್ಡ್ನ ಸದಸ್ಯ ಸುಜಿತ್ ಮಾಡೂರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪಟ್ಟಣ ಪಂಚಾಯಿತಿಯ ಎಂಜಿನಿಯರ್ ದಿನೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಜೀಜ್ ಮಾಡೂರು, ಪ್ರಧಾನ ಕಾರ್ಯದರ್ಶಿ ಅರ್ಜುನ್ ಮಾಡೂರು, ಪಟ್ಟಣ ಪಂಚಾಯಿತಿ ಸದಸ್ಯ ಪ್ರವೀಣ್ ಬಗಂಬಿಲ ತಂಡದ ಜೊತೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.