ಮಂಗಳೂರು: ಬಹುವರ್ಷಗಳ ಕನಸಾಗಿರುವ ಬ್ಯಾರಿ ಭವನ ನಿರ್ಮಾಣವನ್ನು ನನ್ನ ಅವಧಿಯಲ್ಲಿ ನನಸಾಗಿಸುತ್ತೇನೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಹೇಳಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿರುವ ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಬ್ಯಾರಿ ಭವನಕ್ಕೆ ಜಾಗ ಇದ್ದು, ₹6 ಕೋಟಿ ಹಣವೂ ಇದೆ. ಭವನ ನಿರ್ಮಾಣದ ಜೊತೆಗೆ ಕೊಂಕಣಿ, ತುಳು ಅಕಾಡೆಮಿಯಲ್ಲಿ ಇರುವಂತೆ ವಸ್ತು ಸಂಗ್ರಹಾಲಯ ರೂಪಿಸಲೂ ಆದ್ಯತೆ ನೀಡಲಾಗುವುದು. ಪುಸ್ತಕ ಭಂಡಾರ, ಸುಸಜ್ಜಿತ ಗ್ರಂಥಾಲಯದ ನಿರ್ಮಾಣದ ಕನಸೂ ಇದೆ. ಅಕಾಡೆಮಿ ಸದಸ್ಯರ ಜೊತೆ ಚರ್ಚಿಸಿ ಇದನ್ನು ಅನುಷ್ಠಾನ ಗೊಳಿಸಲಾಗುವುದು ಎಂದರು.
ಉಳಿದ ಅಕಾಡೆಮಿ ಜೊತೆ ಸಮನ್ವಯ ಸಾಧಿಸುವ ಜೊತೆಗೆ ತುಳುನಾಡಿನ ಬಹುತ್ವ, ಸಹಬಾಳ್ವೆ ಗಟ್ಟಿಗೊಳಿಸುವ ದಿಸೆಯಲ್ಲಿ ಕೆಲಸ ಆಗಬೇಕಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಇತರ ಕಾರ್ಯಕ್ರಮಗಳ ಖರ್ಚು ಕಡಿತಗೊಳಿಸಿ ಸಂಶೋಧನೆಗೆ ಹೆಚ್ಚು ಒತ್ತು ನೀಡುವ ಉದ್ದೇಶ ಇದೆ ಎಂದು ಹೇಳಿದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್,
ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷರಾದ ರಹೀಂ ಉಚ್ಚಿಲ್, ಮುಹಮ್ಮದ್ ಹನೀಫ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.