ಪುತ್ತೂರು: ತತ್ವ-ಧ್ಯೇಯ ಇಟ್ಟುಕೊಂಡು ಕೆಲಸ ಮಾಡುತ್ತಿರುವ ವಿಶ್ವಕರ್ಮರು ಜಗತ್ತಿಗೆ ನೀಡಿರುವ ಕೊಡುಗೆ ಅಪಾರ. ಈ ಕಾರಣದಿಂದ ವಿಶ್ವಕರ್ಮರು ಅವಲಂಬಿಸಿರುವ ಪಂಚ ಕುಲಕಸುಬಿಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ಗುರುವಾಯನಕೆರೆ ಬಿಆರ್ಸಿ ಕೇಂದ್ರದ ಸಂಪನ್ಮೂಲ ವ್ಯಕ್ತಿ ರಾಜೇಶ್ ಹೇಳಿದರು.
ಪುತ್ತೂರು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುತ್ತೂರು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಅವರು ಉಪನ್ಯಾಸ ನೀಡಿದರು.
ದೇಶದ ಬೆನ್ನೆಲುಬು ರೈತ. ರೈತರ ಬೆನ್ನೆಲುಬು ವಿಶ್ವಕರ್ಮರು. ಭಾರತದ ಸಾಂಸ್ಕೃತಿಕ ಕೊಡುಗೆಯಲ್ಲಿಯೂ ವಿಶ್ವಕರ್ಮರ ಕೊಡುಗೆ ಅಪಾರ. ವಿಶ್ವಕರ್ಮರಿಗೆ ಶಿಕ್ಷಣದ ವ್ಯವಸ್ಥೆ ಜತೆಗೆ ವಿಶ್ವಕರ್ಮ ಅಧ್ಯಯನ ಕೇಂದ್ರವನ್ನು ಸರ್ಕಾರ ರಚಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ತಹಶೀಲ್ದಾರ್ ಪುರಂದರ ಹೆಗ್ಡೆ ಉದ್ಘಾಟಿಸಿದರು.
ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ., ಶಿಕ್ಷಣ ಇಲಾಖೆಯ ವಿಷ್ಣುಪ್ರಸಾದ್, ಸಿಡಿಪಿಒ ಮಂಗಳ, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ಭಾಗವಹಿಸಿದ್ದರು. ತಾಲ್ಲೂಕು ಕಚೇರಿಯ ದಯಾನಂದ ಸ್ವಾಗತಿಸಿದರು. ಚೈತ್ರಾ ನಾಯಕ ಪ್ರಾರ್ಥಸಿದರು. ಗ್ರಾಮ ಆಡಳಿತಾಧಿಕಾರಿ ಶರಣ್ಯ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.