ಮಂಗಳೂರು: ಅವಕಾಶ ವಂಚಿತ ಮಹಿಳೆಯರ ಪ್ರೋತ್ಸಾಹಕ್ಕಾಗಿ ಮಹಿಳಾ ದಿನ ಆಚರಣೆ ಮಾಡುವ ಅಗತ್ಯವಿದೆ. ಇದೇ ಸಂದರ್ಭದಲ್ಲಿ ಪ್ರತಿ ಮಹಿಳೆಯೂ ತನಗೆ ತಾನೇ ಪ್ರೋತ್ಸಾಹಕಿ ಆಗಬೇಕು ಎಂದು ಯೆನೆಪೋಯ ವಿಶ್ವವಿದ್ಯಾನಿಲಯ ಸಂಶೋಧನಾ ಕೇಂದ್ರದ ನಿರ್ದೇಶಕಿ ರೇಖಾ ಸಲಹೆ ನೀಡಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಮಹಿಳಾ ವೇದಿಕೆ, ಮಹಿಳಾ ಘಟಕ, ಸ್ಪರ್ಶ್ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಅಸುರಕ್ಷತೆ, ಪೂರ್ವಾಗ್ರಹ, ಸಮಾಜದ ಬಗೆಗಿನ ಭಯದಿಂದ ಮಹಿಳೆ ಮುಖ್ಯವಾಹಿನಿಗೆ ಬರಲು ಹಿಂದೇಟು ಹಾಕುತ್ತಾಳೆ. ಆದ್ದರಿಂದ ಆತ್ಮಶಕ್ತಿಯನ್ನು ಅರಿಯಲು ಪ್ರತಿ ಮಹಿಳೆ ಮುಂದಾಗಬೇಕು. ಭಾವನಾತ್ಮಕ ಶಾಂತತೆ ಕಾಯ್ದುಕೊಂಡು ಅಬಲೆ ಎಂಬ ಭಾವನೆಯಿಂದ ಹೊರಬರಬೇಕು ಎಂದು ಅವರು ಹೇಳಿದರು.
ಸಾಹಿತಿ ಭುವನೇಶ್ವರಿ ಹೆಗ್ಡೆ, ಮಹಿಳೆ ತನ್ನಷ್ಟಕ್ಕೆ ತಾನು ಸಂತೋಷವಾಗಿರಬೇಕು. ತನ್ನ ಪಾಲಿನ ಕರ್ತವ್ಯವನ್ನು ಪಾಲಿಸಿಕೊಂಡು ಬದುಕು ನಡೆಸಿದಾಗ ಸಂಕಟ ಸಮೀಪ ಸುಳಿಯುವುದಿಲ್ಲ ಎಂದರು.
ಕಾಲೇಜಿನ ಪ್ರಾಂಶುಪಾಲೆ ಅನಸೂಯ ರೈ, ಮಹಿಳಾ ಘಟಕದ ಸಂಚಾಲಕಿ ಶೋಭಾ, ಮಹಿಳಾ ವೇದಿಕೆಯ ಸಂಚಾಲಕಿ ಭಾರತಿ ಪ್ರಕಾಶ್ ಇದ್ದರು. ಭುವನೇಶ್ವರಿ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.