ADVERTISEMENT

ಸೌಜನ್ಯಾ ಪ್ರಕರಣದ ಮರು ತನಿಖೆ: ಮೋದಿ ಘೋಷಿಸಲಿ- ಮಹೇಶ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 5:59 IST
Last Updated 11 ಏಪ್ರಿಲ್ 2024, 5:59 IST

ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಯುವತಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐನಿಂದ ನ್ಯಾಯಾಲಯದ ಉಸ್ತುವಾರಿಯಲ್ಲಿ ಮರುತನಿಖೆ ನಡೆಸುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೈಕೋರ್ಟ್‌ಗೆ ಲಿಖಿತ ಅಭಿಪ್ರಾಯ ನೀಡಬೇಕು. ಏ.14ರಂದು ಮಂಗಳೂರಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಘೋಷಣೆ ಮಾಡಬೇಕು ಎಂದು ಸೌಜನ್ಯಾ ಪರ ಹೋರಾಟ ಸಮಿತಿ ಪ್ರಮುಖ ಮಹೇಶ್ ಶೆಟ್ಟಿ ತಿಮರೋಡಿ ಆಗ್ರಹಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಕರಣ ಮರುತನಿಖೆ ನಡೆಸುವ ಸಂಬಂಧ ಹೈಕೋರ್ಟ್ ಸಿಬಿಐನಿಂದ ಅಭಿಪ್ರಾಯ ಕೇಳಿದೆ. ಸಿಬಿಐ ನೇರವಾಗಿ ಗೃಹ ಸಚಿವಾಲಯ ಮತ್ತು ಪ್ರಧಾನಿ ಕಚೇರಿ ಅಡಿಯಲ್ಲಿ ಬರುತ್ತದೆ. ಹೀಗಾಗಿ, ಮಂಗಳೂರಿಗೆ ಭೇಟಿ ನೀಡಲಿರುವ ಪ್ರಧಾನಿಗೆ ಬಿಜೆಪಿ ನಾಯಕರು ವಿಷಯ ಮನವರಿಕೆ ಮಾಡಿಕೊಟ್ಟು, ಅವರು ಇಲ್ಲಿ ಘೋಷಣೆ ಮಾಡುವಂತೆ ಆಗಬೇಕು. ಇಲ್ಲವಾದಲ್ಲಿ ಈ ಹಿಂದೆ ತಿಳಿಸಿದಂತೆ ಚುನಾವಣೆಯ ನೋಟಾ ಅಭಿಯಾನವನ್ನು ತೀವ್ರಗೊಳಿಸಲಾಗುವುದು’ ಎಂದರು.

ಮೋದಿ ಕಾರ್ಯಕ್ರಮದಲ್ಲಿ ಎಲ್ಲ ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಈಡೇರಿಸಬೇಕು. ಇಲ್ಲವಾದಲ್ಲಿ ಹಿಂದೂ ಧರ್ಮದ ರಕ್ಷಣೆ ಈ ಕರಾವಳಿ ಜಿಲ್ಲೆಯ ನಾಯಕರಿಂದ ಸಾಧ್ಯವಿಲ್ಲ ಮತ್ತು ಎಲ್ಲರೂ ಅತ್ಯಾಚಾರಿಗಳ ಪರ ಎನ್ನುವ ಸಂದೇಶವನ್ನು ಸಾರ್ವಜನಿಕವಾಗಿ ನೀಡಲಾಗುವುದು. ಸೌಜನ್ಯಾ ಹತ್ಯೆಗೂ ಮೊದಲು ನಡೆದ  ಪ್ರಕರಣಗಳ ವಿಶೇಷ ತನಿಖೆ ಆಗಬೇಕು. ನ್ಯಾಯಾಲಯ ಮೇಲುಸ್ತುವಾರಿಯಲ್ಲಿ ಸಿಬಿಐಗೆ ಲಿಖಿತವಾಗಿ ಅದೇಶಿಸಲು ಮೋದಿ ಅವರಿಗೆ ಇಲ್ಲಿನ ನಾಯಕರು ಒತ್ತಾಯಿಸಬೇಕು ಎಂದರು.

ADVERTISEMENT

ಸೌಜನ್ಯಾ ಪ್ರಕರಣದ ಮರು ತನಿಖೆಯ ಅಭಿಪ್ರಾಯವನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆದಷ್ಟು ಶೀಘ್ರ ಹೈಕೋರ್ಟ್‌ಗೆ ನೀಡಬೇಕು, ಅಕ್ರಮ ವಂಚನೆಯಿಂದ ವಶಪಡಿಸಿಕೊಂಡ ಸಾವಿರಾರು ಎಕರೆ ಭೂಮಿಯನ್ನು ಧರ್ಮೋದ್ಯಮಿಗಳಿಂದ ವಾಪಸ್ ಪಡೆಯಬೇಕು. ರಾಜ್ಯ ಸರ್ಕಾರ ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೂ ನೋಟ ಅಭಿಯಾನ ತೀವ್ರ ಗೊಳಿಸಲಾಗುವುದು. ಇಲ್ಲವಾದಲ್ಲಿ ಕ್ಷೇತ್ರದಲ್ಲಿ 2.5 ಲಕ್ಷ ಮತಗಳು ನೋಟಾಕ್ಕೆ ಬೀಳಲಿವೆ ಎಂದರು.

ಹೋರಾಟ ಸಮಿತಿಯ ಪ್ರಸನ್ನ ರವಿ ಮಾತನಾಡಿ, ‘ಸಾಮಾಜಿಕ ಜಾಲತಾಣಗಳಲ್ಲಿ ಹೋರಾಟಗಾರರ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ. ಧೈರ್ಯ ಇದ್ದರೆ ಮುಖತಃ ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.

ಹೋರಾಟ ಸಮಿತಿಯ ಅನಿಲ್‌ಕುಮಾರ್, ತಮ್ಮಣ್ಣ ಶೆಟ್ಟಿ, ಮನೋಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.