ದಾವಣಗೆರೆ: ದುರ್ಗಾಂಬಿಕಾ ದೇವಿ ಜಾತ್ರೆಯ ಅಂಗವಾಗಿ ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ರಾಷ್ಟ್ರಮಟ್ಟದ ಬಯಲು ಜಂಗಿ ಕುಸ್ತಿ ಸ್ಪರ್ಧೆಯ ಅಂತಿಮ ಪಂದ್ಯ ಸಮಬಲದಲ್ಲಿ ಅಂತ್ಯ ಕಂಡಿತು.
ಕುಸ್ತಿಪಟುಗಳಾದ ಹರಿಯಾಣದ ವಿಕ್ಕಿ ಹಾಗೂ ಪಂಜಾಬ್ನ ಗಗನ್ ಸಿಂಗ್ ನಡುವೆ 1 ಗಂಟೆಗೂ ಹೆಚ್ಚು ಕಾಲ ನಡೆದ ಫೈನಲ್ ಪಂದ್ಯವು ಫಲಿತಾಂಶವಿಲ್ಲದೇ ಕೊನೆಗೊಂಡಿತು.
ಅಂತಿಮವಾಗಿ ಇಬ್ಬರನ್ನೂ ‘ವಿಜಯಿ’ಗಳು ಎಂದು ಘೋಷಿಸಿ, ಇಬ್ಬರಿಗೂ ತಲಾ ₹ 1.25 ಲಕ್ಷ ನಗದು ಬಹುಮಾನ ನೀಡಲಾಯಿತು. 2 ಕೆ.ಜಿಯ ಬೆಳ್ಳಿ ಗದೆಯನ್ನು ದೇವಸ್ಥಾನದ ಅಧೀನದಲ್ಲಿ ಇರಿಸಿಲಾಯಿತು.
‘ಹರಿಯಾಣದ ವಿಕ್ಕಿ ಅಂತರರಾಷ್ಟ್ರೀಯ ಕುಸ್ತಿಪಟುವಾಗಿದ್ದು, 16 ಬಾರಿ ಅಂತರರಾಷ್ಟೀಯ ಪಂದ್ಯಗಳನ್ನು ಆಡಿದ್ದು, ಹಲವು ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ’ ಎಂದು ರೆಫರಿಯೊಬ್ಬರು ತಿಳಿಸಿದರು.
3 ದಿನ ನಡೆದ ಕುಸ್ತಿ ಸ್ಪರ್ಧೆಯಲ್ಲಿ ದೆಹಲಿ, ಪಂಜಾಬ್, ಹರಿಯಾಣ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ 400ಕ್ಕೂ ಹೆಚ್ಚು ಕುಸ್ತಿಪಟುಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಿದರು.
ಮೇಯರ್ ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯ ವೀರೇಶ್ ಪೈಲ್ವಾನ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಖಂಡೋಜಿ ಪೈಲ್ವಾನ್, ಸ್ಟಾರ್ ಮಂಜು, ಸ್ಟಾರ್ ವೀರಣ್ಣ, ಬಿ.ವೀರಣ್ಣ, ಮಹಾಂತೇಶ್ ಯಾದವ್
ರೆಫರಿಗಳಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.