ದಾವಣಗೆರೆ: ಬಸವಣ್ಣನವರ ಕಾಲದ ಅನುಭವ ಮಂಟಪದಲ್ಲಿ ಕಾಯಕ ನಿಷ್ಠೆಯ ಮೂಲಕ ಗುರುತಿಸಿಕೊಂಡಿರುವ ಸಿದ್ಧರಾಮೇಶ್ವರರ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಭೋವಿ ಸಮಾಜದ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘12ನೇ ಶತಮಾನ ಶ್ರೇಷ್ಠ ವಚನಕಾರರ ಯುಗವಾಗಿದ್ದು, ಶಿವಯೋಗಿ ಸಿದ್ಧರಾಮೇಶ್ವರರ ಕಾಯಕ ಪ್ರಸ್ತುತ. ಸಮಾಜದ ಒಳಿತಿಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯವನ್ನು ನಿರ್ವಹಿಸಿದರು. ಆದ್ದರಿಂದ ನಾವೆಲ್ಲರೂ ಜಾತಿ, ಮತ, ಪಂಥಗಳೆನ್ನದೇ ಎಲ್ಲರೂ ಅವರ ಜಯಂತ್ಯುತ್ಸವವನ್ನು ಆಚರಿಸಬೇಕು’ ಎಂದು ಸಲಹೆ ನೀಡಿದರು.
‘ಮಹಾನ್ ಶರಣರ ಸ್ಮರಣೆಯ ಮೂಲಕ ಸಮಾಜ ತನ್ನನ್ನು ತಾನು ಅರಿತು ಬದಲಾಗಬೇಕಿದೆ. ಕೆರೆ, ಕಟ್ಟೆ, ಕಾಲುವೆ, ಕಟ್ಟುವ ಕರ್ಮ ಮಾರ್ಗದಲ್ಲಿ ಸಾಗಿ, ಮಾನವ ಜನ್ಮದ ಸಾರ್ಥಕತೆಯನ್ನು ನಿರೂಪಿಸಿದ ಇವರು ಬಸವಣ್ಣ ಹಾಗೂ ಶರಣರ ಭೇಟಿಯಿಂದ ಜ್ಞಾನಮಾರ್ಗದಲ್ಲಿ ಸಾಗಿದವರು’ ಎಂದರು.
ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಮಾತನಾಡಿ, ‘ಕಾಯಕ ನಂಬಿ ಬದುಕುವ ನಮಗೆ ರಾಮ ಮುಖ್ಯವಲ್ಲ. ಅಂಬೇಡ್ಕರ್, ಸಂವಿಧಾನ ಮುಖ್ಯ’ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ನಗರ ಪಾಲಿಕೆ ಸದಸ್ಯರಾದ ಶಿವಾನಂದ, ರೇಷ್ಮೆ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಡಿ.ಬಸವರಾಜು, ಸಮಾಜದ ಮುಖಂಡರಾದ ಮಂಜುನಾಥ್, ಶ್ರೀನಿವಾಸ್. ಎಚ್. ಜಯಣ್ಣ, ಆರ್.ಎಲ್.ಕಾನೂನು ಕಾಲೇಜಿನ ಪ್ರಾಧ್ಯಾಪಕ ವಿದ್ಯಾಧರ ವೇದಮೂರ್ತಿ ಟಿ. ಉಪನ್ಯಾಸ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.