ದಾವಣಗೆರೆ: ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನ ಆರಂಭದಲ್ಲಿ ಉತ್ತಮವಾಗಿ ಸುರಿದು ರೈತರಲ್ಲಿ ನಿರೀಕ್ಷೆ ಹುಟ್ಟಿಸಿದ್ದ ಮಳೆ ಸದ್ಯ ತನ್ನ ಆರ್ಭಟ ಕಡಿಮೆ ಮಾಡಿದೆ. ಜಿಲ್ಲೆಯಲ್ಲಿ ವಾರದಿಂದ ವರುಣನ ಕೃಪೆ ಇಲ್ಲದಿರುವ ಕಾರಣ ರೈತರು ಆತಂಕಗೊಂಡಿದ್ದಾರೆ.
ಕಳೆದ ವರ್ಷ ಆವರಿಸಿದ್ದ ಭೀಕರ ಬರದಿಂದ ನಲುಗಿರುವ ಕೃಷಿಕರು ಈ ಬಾರಿಯಾದರೂ ಬೆಳೆ ಕೈಗೆಟುಕಬಹುದು ಎಂಬ ನಿರೀಕ್ಷೆಯಲ್ಲೇ ನಿತ್ಯವೂ ಆಸೆಗಣ್ಣಿನಿಂದ ಆಕಾಶದತ್ತ ದೃಷ್ಟಿ ನೆಟ್ಟಿದ್ದಾರೆ.
ಮೇ ತಿಂಗಳಲ್ಲಿ ಆಗಾಗ ಸುರಿದ ಮಳೆಯಿಂದ ಹರ್ಷಚಿತ್ತರಾಗಿದ್ದ ರೈತರು ಹುರುಪಿನಲ್ಲೇ ಬಿತ್ತನೆ ಮಾಡಿದ್ದಾರೆ. ಆದರೆ, ಜೂನ್ ಮುಗಿಯುತ್ತ ಬಂದರೂ ಸಮರ್ಪಕ ಮಳೆಯಾಗಿಲ್ಲ. ಆಗಾಗ ತುಂತುರು, ಕೆಲವೆಡೆ ಸಾಧಾರಣ ಮಳೆಯಾಗಿದ್ದು ಹೊರತುಪಡಿಸಿದರೆ ಉತ್ತಮವಾಗಿ ಸುರಿಯುತ್ತಿಲ್ಲ. ಮಳೆ ಕೊರತೆಯಿಂದ ಕೆಲವೆಡೆ ರೈತರು ಬಿತ್ತನೆಗೆ ಭೂಮಿ ಹದ ಮಾಡಿಕೊಂಡು ಮೋಡ ನೋಡುತ್ತ ಕುಳಿತಿದ್ದಾರೆ. ಇನ್ನು ಕೆಲವರು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ.
ಜಿಲ್ಲೆಯಲ್ಲಿ ಪ್ರಮುಖವಾಗಿ ಮೆಕ್ಕೆಜೋಳ ಬಿತ್ತಲಾಗಿದೆ. ಆಗಾದ ಸುರಿದ ಹದ ಮಳೆಯಿಂದ ಅಲ್ಲಲ್ಲಿ ಮೆಕ್ಕೆಜೋಳ ಮೊಳಕೆಯೊಡೆದಿದೆ. ಕೆಲವೆಡೆ ಮೆಕ್ಕೆಜೋಳದ ಬಿತ್ತನೆ ಮುಗಿದಿದೆ. ಈಗ ಮಳೆ ಬೇಕೇಬೇಕು. ಆದರೆ, ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದ ಕಾರಣ ರೈತರಲ್ಲಿ ಆತಂಕ ಮನೆಮಾಡಿದೆ.
ಮೊಳಕೆಯೊಡೆದ ಮೆಕ್ಕೆಜೋಳಕ್ಕೆ ವಾರದೊಳಗೆ ಸಾಧಾರಣವಾದರೂ ಮಳೆಯಾಗಬೇಕು. ಇಲ್ಲದಿದ್ದರೆ ಕಳೆದ ವರ್ಷದ ಪರಿಸ್ಥಿತಿಯೇ ಮರುಕಳಿಸಲಿದೆ. ಇನ್ನೆರಡು ದಿನಗಳಲ್ಲಿ ಮಳೆಯಾಗದಿದ್ದರೆ ಮೊಳಕೆಯೊಡೆದ ಮೆಕ್ಕೆಜೋಳ ಮೇಲಕ್ಕೆ ಬರುವುದಿಲ್ಲ. ಬೆಳೆಯನ್ನು ಮತ್ತೆ ಅಳಿಸಿ ಹಾಕಬೇಕಾಗುತ್ತದೆ. ಹಾಗಾದರೆ ಮತ್ತೆ ನಷ್ಟ ಎಂಬುದು ರೈತರ ಅಳಲು.
ಜಿಲ್ಲೆಯಲ್ಲಿ 90,000 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಈ ಬಾರಿ ಜಿಲ್ಲೆಯಾದ್ದಯಂತ 2.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಆ ಪೈಕಿ 1.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 65,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇದೆ.
ಮೆಕ್ಕೆಜೋಳ ಹೊರತುಪಡಿಸಿ ತೊಗರಿ, ಹತ್ತಿ, ಅಲಸಂದೆ, ಸೋಯಾಬೀನ್, ಶೇಂಗಾ ಬಿತ್ತನೆಯಾಗಿದೆ. ನ್ಯಾಮತಿ ಭಾಗದಲ್ಲಿ ತರಕಾರಿ ಬೆಳೆಯಲಾಗಿದೆ. ಇನ್ನು ಕೆಲ ಭಾಗದಲ್ಲಿ ರೈತರು ಬಿತ್ತನೆಗೆ ಭೂಮಿ ಹದ ಮಾಡುತ್ತಿದ್ದಾರೆ.
ಚನ್ನಗಿರಿ, ಜಗಳೂರು, ಹರಿಹರ, ಮಲೇಬೆನ್ನೂರು, ಸಂತೇಬೆನ್ನೂರು, ನ್ಯಾಮತಿ, ಹೊನ್ನಾಳಿಯ ಕೆಲ ಭಾಗದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ.
ಜಿಲ್ಲೆಯಲ್ಲಿ ಜೂನ್ 1ರಿಂದ 20ರವರೆಗೆ 368.4 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 344.4 ಮೀ.ಮೀ. ಮಳೆಯಾಗಿದೆ. ಮಳೆ ಕೊರತೆಯಿಂದಾಗಿ ಬಿತ್ತನೆಯೂ ಕುಂಠಿತವಾಗಿದೆ.
‘ಆರಂಭದಲ್ಲಿ ಉತ್ತಮ ಮಳೆಯಾದ ಕಾರಣ ಮೆಕ್ಕೆಜೋಳ ಬೆಳೆದಿದ್ದೆ. ನನ್ನಂತೆ ಜೂನ್ನಲ್ಲಿ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲೇ ಈ ಭಾಗದಲ್ಲಿ ರೈತರು ಬಿತ್ತನೆ ಮಾಡಿದ್ದರು. ಆದರೆ, ಮಳೆಯೇ ಇಲ್ಲ. ಮೆಕ್ಕೆಜೋಳ ಮೊಳಕೆಯೊಡೆದಿದೆ. ಈಗ ಮಳೆ ಅಗತ್ಯವಾಗಿ ಬೇಕು. ವಾರದಲ್ಲಿ ಮಳೆಯಾಗದಿದ್ದರೆ ಬಿತ್ತನೆ ಮಾಡಿದ ಮೆಕ್ಕೆಜೋಳ ಹಾಳಾಗಲಿದೆ‘ ಎಂದು ಕಂಚಿನಹಳ್ಳಿಯ ರೈತ ಸಂತೋಷ್ ಅಳಲು ತೋಡಿಕೊಂಡರು.
‘ನಮ್ಮ ಭಾಗದಲ್ಲಿ ಮೆಕ್ಕೆಜೋಳ ಬಿತ್ತನೆ ಶೇ 90ರಷ್ಟು ಪ್ರಮಾಣದಲ್ಲಿ ಮುಗಿದಿದೆ. ಕೆಲವರು ಶೇಂಗಾ ಬಿತ್ತಿದ್ದಾರೆ. ತೇವಾಂಶದಿಂದ ಶೇ 50ರಷ್ಟು ಗಿಡಗಳು ಮೇಲಕ್ಕೆ ಬಂದಿವೆ. ಕೆಲವು ಮೊಳೆಕೆಯೊಡೆದಿವೆ. ಈಗಾಗಲೇ ಮಳೆ ಬಂದಿದ್ದರೆ ಬೆಳೆ ನಳನಳಿಸುತ್ತಿತ್ತು. ಎರಡು ದಿನಗಳಲ್ಲಿ ಮಳೆಯಾಗಬೇಕು. ಇಲ್ಲದಿದ್ದರೆ ಕಳೆದ ವರ್ಷದಂತೆ ಈ ಬಾರಿಯೂ ರೈತರಿಗೆ ಕಣ್ಣೀರೇ ಗತಿ’ ಎಂದು ಆರುಂಡಿಯ ರೈತ ಶಿವು ಬೇಸರದಿಂದಲೇ ಹೇಳಿದರು.
‘ಕೂಲಿ ಕಾರ್ಮಿಕರು ಸಿಗದ ಕಾರಣ ಎಲ್ಲದಕ್ಕೂ ಈಗ ಯಂತ್ರಗಳನ್ನು ಅವಲಂಬಿಸಬೇಕಿದೆ. ಎಲ್ಲ ಸೇರಿ ಒಂದು ಎಕರೆಯಲ್ಲಿ ಮೆಕ್ಕೆಜೋಳ ಬೆಳೆಯಲು ₹ 15,000ದಿಂದ ₹ 20,000 ಖರ್ಚು ಆಗುತ್ತದೆ. ಮೆಕ್ಕೆಜೋಳ ಮೊಳಕೆಯೊಡೆದಿದೆ. 10 ದಿನಗಳಿಂದ ಮಳೆಯೇ ಇಲ್ಲ. ಕಳೆದ ವರ್ಷವೂ ಬಿತ್ತನೆ ಮಾಡಿದ ಒಂದು ತಿಂಗಳು ಮಳೆಯೇ ಆಗಿರಲಿಲ್ಲ’ ಎಂದು ಜಗಳೂರು ಗೊಲ್ಲರಹಟ್ಟಿಯ ವಿ.ವೆಂಕಟೇಶ್ ಆತಂಕ ವ್ಯಕ್ತಪಡಿಸಿದರು.
8 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತಿದ್ದೇನೆ. ಮೊಳಕೆ ಬಂದಿದೆ. ಈ ಹಂತದಲ್ಲಿ ತುಂತುರು ಮಳೆ ಬಂದರೂ ಸಾಕು. ಇನ್ನೂ ಎರಡು ದಿನಗಳಲ್ಲಿ ಮಳೆ ಆಗದಿದ್ದರೆ ಇಳುವರಿ ಬರುವುದು ಅನುಮಾನ.ವಿ. ವೆಂಕಟೇಶ್ ರೈತ ಜಗಳೂರು ಗೊಲ್ಲರಹಟ್ಟಿ
ಇನ್ನು 4 ದಿನಗಳಲ್ಲಿ ಮಳೆಯಾಗದಿದ್ದರೆ ಮೆಕ್ಕೆಜೋಳ ಅಳಿಸುವುದು ಅನಿವಾರ್ಯ. ಏನು ಮಾಡಬೇಕೆಂಬುದೇ ತೋಚುತ್ತಿಲ್ಲ. ಸರ್ಕಾರ ಬೆಳೆ ಪರಿಹಾರ ಕೊಡಲು ಮುಂದಾಗಬೇಕು.ಶಿವು ರೈತ ಆರುಂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.