ದಾವಣಗೆರೆ: ಚಾಮರಾಜನಗರದಲ್ಲಿರುವ ನಟ ದರ್ಶನ್ ಒಡೆತನದ ಫಾರಂಹೌಸ್ನಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಮಹೇಶ್ ಎಂಬುವರಿಗೆ ರೈತ ಮುಖಂಡ ಬೆಳವನೂರು ನಾಗೇಶ್ವರರಾವ್ ಹಾಗೂ ಅವರ ಸ್ನೇಹಿತರು ₹ 25,000 ನೆರವು ನೀಡಿದ್ದಾರೆ.
‘6 ವರ್ಷಗಳ ಹಿಂದೆ ದರ್ಶನ್ ಅವರ ಫಾರಂಹೌಸ್ನಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಅವರಿಗೆ ಅಲ್ಲಿ ಎತ್ತೊಂದು ತಿವಿದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಅಂದಿನಿಂದ ಹಾಸಿಗೆ ಹಿಡಿದಿದ್ದಾರೆ. ಅವರು ಸಂಕಷ್ಟ ಎದುರಿಸುತ್ತಿರುವುದು ಸುದ್ದಿವಾಹಿನಿಯಿಂದ ತಿಳಿಯಿತು. ಆದ್ದರಿಂದ ಆರ್ಥಿಕ ನೆರವು ನೀಡಿದ್ದೇವೆ’ ಎಂದು ಬೆಳವನೂರು ನಾಗೇಶ್ವರರಾವ್, ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಘಟನೆಯಿಂದ ಮಹೇಶ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಅಂದಿನಿಂದ ಅವರು ಹಾಸಿಗೆ ಹಿಡಿದಿದ್ದಾರೆ. ಚಿಕಿತ್ಸೆಗೆಂದು ಆರ್ಥಿಕ ನೆರವು ಕೇಳಿದರೆ, ನಟ ದರ್ಶನ್ ಅವರು ದಾಳಿ ಮಾಡಿಸಲು ನಾಯಿಗಳನ್ನು ಬಿಟ್ಟಿದ್ದರು. ದರ್ಶನ್ ಅವರಿಗೆ ಲಕ್ಷಾಂತರ ಜನ ಅಭಿಮಾನಿಗಳು ಇದ್ದಾರೆ. ಒಬ್ಬೊಬ್ಬರು ಒಂದೊಂದು ರೂಪಾಯಿ ಕೊಟ್ಟಿದ್ದರೂ, ಮಹೇಶ್ ಚಿಕಿತ್ಸೆಗೆ ಸಹಾಯವಾಗುತ್ತಿತ್ತು’ ಎಂದು ಹೇಳಿದರು.
ಬೆಳವನೂರು ನಾಗೇಶ್ವರರಾವ್ ₹ 11,500, ಹದಡಿ ಚಂದ್ರಣ್ಣ ₹ 10,000 ಹಾಗೂ ಪುಟ್ಟರಾಜು ಅವರು ₹ 3,500 ಮೊತ್ತವನ್ನು ಮಹೇಶ್ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿದರು.
ಎಂ.ಎನ್.ಚಂದ್ರಶೇಖರ್, ಪುಟ್ಟರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.