ಹೊನ್ನಾಳಿ: ಡಾ.ಬಿ.ಆರ್. ಅಂಬೇಡ್ಕರ್ ಅವರು ಅವಮಾನ, ಕಿರುಕುಳಗಳನ್ನು ಎದುರಿಸಿ, ಶಿಕ್ಷಣ ಪಡೆದು, ಹೋರಾಟದ ಮೂಲಕ ಎತ್ತರಕ್ಕೆ ಬೆಳೆದರು ಎಂದು ಉಪ ವಿಭಾಗಾಧಿಕಾರಿ ವಿ. ಅಭಿಷೇಕ್ ತಿಳಿಸಿದರು.
ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಅಂಬೇಡ್ಕರ್ ಅವರಿಗೆ ಬಾಲ್ಯದಲ್ಲಿ ಏನೇ ಕಷ್ಟಗಳು ಎದುರಾದರೂ ಶಿಕ್ಷಣವನ್ನು ಮಾತ್ರ ನಿಲ್ಲಿಸಲಿಲ್ಲ. ಅವರ ಸಾಧನೆಯ ಹಿಂದೆ ಸತತ ಓದು ಮತ್ತು ಪರಿಶ್ರಮ ಅಡಗಿತ್ತು. ದೀನ ದಲಿತರ ಮತ್ತು ಅಮಾಯಕ ಹೆಣ್ಣುಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅಂಬೇಡ್ಕರ್ ಅವರು ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ರಚಿಸಿ ತಳ ಸಮುದಾಯದವರಿಗೆ ಅಧಿಕಾರ ಹಾಗೂ ಮೀಸಲಾತಿ ದೊರೆಯುವಂತೆ ಮಾಡಿದರು ಎಂದು ಬಣ್ಣಿಸಿದರು.
ಗೈರಾದವರಿಗೆ ನೋಟಿಸ್: ಅಂಬೇಡ್ಕರ್ ಜಯಂತಿಗೆ ಬಹಳಷ್ಟು ಜನ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರಾಗಿದ್ದನ್ನು ಕಂಡ ದಲಿತ ಮುಖಂಡರು, ಕಾರಣ ಕೇಳಿ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಒತ್ತಾಯಿಸಿದರು.
ಕಾರ್ಯಕ್ರಮಕ್ಕೆ ಗೈರಾದವರಿಗೆ ನೋಟಿಸ್ ನೀಡುವಂತೆ ಉಪವಿಭಾಗಾಧಿಕಾರಿ ಅಭಿಷೇಕ್ ಅವರು ತಹಶೀಲ್ದಾರ್ ಅವರಿಗೆ ಸೂಚಿಸಿದರು.
ತಹಶೀಲ್ದಾರ್ ಪುರಂದರ ಹೆಗ್ಡೆ, ದಲಿತ ಮುಖಂಡರಾದ ದಿಡಗೂರು ತಮ್ಮಣ್ಣ, ಮಾರಿಕೊಪ್ಪ ಮಂಜಪ್ಪ, ಸೊರಟೂರು ಹನುಮಂತಪ್ಪ, ಕುರುವ ಮಂಜುನಾಥ ಮಾತನಾಡಿದರು.
ಬೆಸ್ಕಾಂ ಎಇಇ ಜಯಪ್ಪ, ಬಿಇಒ ಎಸ್.ಸಿ. ನಂಜರಾಜ್, ಡಾ.ಕೆಂಚಪ್ಪ ಬಂತಿ, ಪುರಸಭೆ ಮುಖ್ಯಾಧಿಕಾರಿ ಎಚ್. ನಿರಂಜನಿ, ಪಿಡಿಒ ಮೊಹಮ್ಮದ್ ರಫಿ, ಸಮಾಜ ಕಲ್ಯಾಣ ಇಲಾಖೆಯ ಉಮಾದೇವಿ, ಜಯಶ್ರೀ, ಮಂಜುನಾಥ್, ಸತೀಶ್, ಮಂಜುಳಾ, ರಾಧಾ ಪಾಲ್ಗೊಂಡಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಉಮಾ ಸ್ವಾಗತಿಸಿ, ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.