ಬಸವಾಪಟ್ಟಣ: ಜಗತ್ತಿನಲ್ಲಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಭೇದಭಾವ ಮರೆತು ಎಲ್ಲರೂ ಒಂದೇ ವೇದಿಕೆಯಲ್ಲಿ ಆಚರಿಸಿದರೆ ಭಾವೈಕ್ಯ ವೃದ್ಧಿಯಾಗುತ್ತದೆ ಎಂದು ರಾಜ್ಯ ರೈತ ಮುಖಂಡ ತೇಜಸ್ವಿಪಟೇಲ್ ಹೇಳಿದರು.
ಇಲ್ಲಿನ ಹಾಲಸ್ವಾಮಿ ಗವಿಮಠದಲ್ಲಿ ನಡೆಯುತ್ತಿರುವ ಶಿವ ಯೋಗಾನುಷ್ಠಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಧಾರ್ಮಿಕ ಆಚರಣೆಗಳು ಮೂಢನಂಬಿಕೆಯಿಂದ ಹೊರತಾಗಿದ್ದು, ವೈಚಾರಿಕ ಮತ್ತು ಸರಳತೆಯಿಂದ ಕೂಡಿರಬೇಕು. ಪ್ರಾಚೀನ ಧರ್ಮಗಳಲ್ಲಿ ಇದ್ದ ಸಂಕೀರ್ಣತೆಯನ್ನು ನೋಡಿದ ಧರ್ಮ ಸಂಸ್ಥಾಪಕರು ಎಲ್ಲರೂ ಸುಲಭವಾಗಿ ಅನುಸರಿಸಬಹುದಾದ, ವಿಚಾರಪೂರ್ಣ ತತ್ವ ಸಿದ್ಧಾಂತಗಳಿಂದ ಕೂಡಿದ ಧರ್ಮಗಳನ್ನು ಸ್ಥಾಪಿಸಿದ್ದಾರೆ. ಅವುಗಳನ್ನು ಸರಿಯಾಗಿ ಅರಿತು ಆಚರಿಸಿದಾಗ ಜಗತ್ತಿನಲ್ಲಿ ಶಾಂತಿ ನೆಮ್ಮದಿ ಸಾಧ್ಯ. ಇಂತಹ ಮೂಲ ಉದ್ದೇಶವನ್ನು ಹೊಂದಿರುವ ಇಲ್ಲಿನ ಹಾಲಸ್ವಾಮಿ ಗವಿಮಠ ಮೂರು ಶತಮಾನಗಳಿಂದ ಮಾನವ ಸಮಾಜದ ಉದ್ಧಾರಕ್ಕೆ ಶ್ರಮಿಸುತ್ತಿದೆ’ ಎಂದು ತೇಜಸ್ವಿಪಟೇಲ್ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಗವಿಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿದರು. ಮಲೆಕುಂಬಳೂರು ಆಂಜನೇಯಸ್ವಾಮಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಜಿ.ಇ. ಸುಧಾಕರ್, ಅಂಗಡಿ ನಾಗರಾಜ್, ಮಹೇಶ್ವರಪ್ಪ ಭಾಗವಹಿಸಿದ್ದರು.
ದಾವಣಗೆರೆಯ ನಮನ ಅಕಾಡೆಮಿಯ ನೃತ್ಯ ಗುರು ಡಿ.ಕೆ.ಮಾಧವಿ ಗೋಪಾಲಕೃಷ್ಣ ಮತ್ತು ಶಿಷ್ಯ ವೃಂದದಿಂದ ‘ನವಶಕ್ತಿ ನಮನ’ ನೃತ್ಯ ರೂಪಕ ಏರ್ಪಡಿಸಲಾಗಿತ್ತು. ಪ್ರತಿದಿನದಂತೆ ಪುರಾಣ, ಪ್ರವಚನ, ಸಂಗೀತ, ಸ್ವಾಮೀಜಿಯವರ ಧಾನ್ಯ ತುಲಾಭಾರ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಮ ಪಂಚಾಯಿತಿ ಸದಸ್ಯೆ ಎಚ್.ಎಂ.ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.