ADVERTISEMENT

ಬುದ್ಧ ಜಗತ್ತಿಗೆ ಶಾಂತಿ ಸಂದೇಶ ಸಾರಿದ ದಾರ್ಶನಿಕ: ಸಣ್ಣರಾಮಪ್ಪ

​ಪ್ರಜಾವಾಣಿ ವಾರ್ತೆ
Published 24 ಮೇ 2024, 5:41 IST
Last Updated 24 ಮೇ 2024, 5:41 IST
ನ್ಯಾಮತಿ ತಾಲ್ಲೂಕು ಸಂತ ಸೇವಾಲಾಲ್ ಜನ್ಮಸ್ಥಾನ ಭಾಯಾಗಡ್‌ನಲ್ಲಿ ಗುರುವಾರ ಸಂತ ಸೇವಾಲಾಲ್, ಮರಿಯಮ್ಮದೇವಿ 27ನೇ ವಾರ್ಷಿಕೋತ್ಸವ ಹಾಗೂ ಬುದ್ಧ ಪೂರ್ಣಿಮಾ ಅಂಗವಾಗಿ ನಡೆದ ಭೋಗ್ (ಹೋಮಕುಂಡ) ಕಾರ್ಯಕ್ರಮದಲ್ಲಿ ಮಹಾಮಠ ಸಮಿತಿಯವರು ಮತ್ತು ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ನ್ಯಾಮತಿ ತಾಲ್ಲೂಕು ಸಂತ ಸೇವಾಲಾಲ್ ಜನ್ಮಸ್ಥಾನ ಭಾಯಾಗಡ್‌ನಲ್ಲಿ ಗುರುವಾರ ಸಂತ ಸೇವಾಲಾಲ್, ಮರಿಯಮ್ಮದೇವಿ 27ನೇ ವಾರ್ಷಿಕೋತ್ಸವ ಹಾಗೂ ಬುದ್ಧ ಪೂರ್ಣಿಮಾ ಅಂಗವಾಗಿ ನಡೆದ ಭೋಗ್ (ಹೋಮಕುಂಡ) ಕಾರ್ಯಕ್ರಮದಲ್ಲಿ ಮಹಾಮಠ ಸಮಿತಿಯವರು ಮತ್ತು ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು   

ಭಾಯಾಗಡ್ (ನ್ಯಾಮತಿ): ಬುದ್ಧ ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾನ್ ದಾರ್ಶನಿಕ ಎಂದು ನಿವೃತ್ತ ಪ್ರಾಧ್ಯಾಪಕ, ಚಿಂತಕ ಸಣ್ಣರಾಮಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಭಾಯಾಗಡ್ ಕ್ಷೇತ್ರದಲ್ಲಿ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯಿಂದ ಗುರುವಾರ ನಡೆದ ಸಂತ ಸೇವಾಲಾಲ್ ಮತ್ತು ಮಾತೆ ಮರಿಯಮ್ಮ ದೇವಿಯ 27ನೇ ವಾರ್ಷಿಕೋತ್ಸವ ಹಾಗೂ ಬುದ್ಧ ಪೂರ್ಣಿಮಾ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಬುದ್ಧ ಜಗತ್ತಿಗೆ ಧ್ಯಾನ, ಜ್ಞಾನದ ಮೂಲಕ ಮಹಾಬೆಳಕು ನೀಡಿದರು. ನೊಂದ ಜನರಲ್ಲಿ ಪ್ರೀತಿ, ವಿಶ್ವಾಸ, ಕಾರುಣ್ಯವನ್ನು ತೋರಿ, ಸಮಾಜದಲ್ಲಿ ದುಃಖಿತರು, ಅಸಮಾನತೆಯಲ್ಲಿ ಬದುಕು ನಡೆಸುತ್ತಿರುವವರಿಗೆ ಸಮಾನತೆ ತತ್ವ ಬೋಧಿಸಿದ ಮಹಾಗುರು’ ಎಂದು ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣಕುಮಾರ ಹೇಳಿದರು.

ADVERTISEMENT

ಮಹಾಮಠ ಸಂಸ್ಥಾಪಕ ಸದಸ್ಯ ವೈದ್ಯ ಎಲ್. ಈಶ್ವರನಾಯ್ಕ ಮಾತನಾಡಿ, ‘ಬುದ್ಧ ಪೂರ್ಣಿಮಾ ದಿನದಂದು ಸಂತ ಸೇವಾಲಾಲ್ ಮತ್ತು ಮರಿಯಮ್ಮ ಮೂರ್ತಿಗಳನ್ನು 26 ವರ್ಷಗಳ ಹಿಂದೆ ಪ್ರತಿಷ್ಠಾಪಿಸಿ ಬಂಜಾರ ಸಮುದಾಯಕ್ಕೆ ಶಾಂತಿಯ ಸಂದೇಶ ರವಾನಿಸಲಾಗಿದೆ’ ಎಂದರು.

ಮಹಾಮಠ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮಾತನಾಡಿ, ‘ಬುದ್ಧನ ವಿಚಾರಗಳು ಎಲ್ಲಾ ಕಾಲಕ್ಕೂ ಸತ್ಯ. ಹಾಗಾಗಿ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಸೇವಾಲಾಲರ ವಿಚಾರಗಳು ಬಂಜಾರ ಸಮುದಾಯವನ್ನು ವೈಚಾರಿಕತೆಯ ಕಡೆಗೆ ಕೊಂಡೊಯ್ಯಲಿದೆ ಎಂಬ ಭರವಸೆ ನಮಗಿದೆ’ ಎಂದರು.

ಚಿತ್ರದುರ್ಗ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ದುಬ್ಬದಹಳ್ಳಿ ಶಿವಪ್ರಕಾಶ ಸ್ವಾಮೀಜಿ, ಅರ್ಚಕ ಸೇವಾಸಾಧು, ಉಪಾಧ್ಯಕ್ಷ ಕುಮಾರನಾಯ್ಕ, ಧರ್ಮದರ್ಶಿ ಪರಿಷತ್ತಿನ ಸದಸ್ಯ ಭೋಜ್ಯಾನಾಯ್ಕ, ಖಜಾಂಚಿ ಕೆ.ಟಿ.ನಾಗರಾಜ, ನಿರ್ದೇಶಕರಾದ ಪಾಂಡುರಂಗನಾಯ್ಕ, ಚಂದ್ರಶೇಖರನಾಯ್ಕ, ಸೌಮ್ಯಾ ಬಿ. ನಾಯ್ಕ, ಜಾನಾನಾಯ್ಕ, ಸಹಕಾರ್ಯದರ್ಶಿ ಸವಿತಾಬಾಯಿ, ಹೀರಾಲಾಲ್, ಗೋಶಾಲಾ ಸಮಿತಿಯ ಅಧ್ಯಕ್ಷ ನಾನ್ಯಾನಾಯ್ಕ, ಕುಮಾರನಾಯ್ಕ, ಅಂಜಲಿಬಾಯಿ ಇದ್ದರು.

ನಿರ್ವಹಣಾ ಸಮಿತಿ ಅಧ್ಯಕ್ಷ ಹನುಮಂತನಾಯ್ಕ ಎನ್. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.