ಹರಿಹರ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾರ್ಚ್ 14ರಂದು ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ದಾವಣಗೆರೆಯ ವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಜಿ.ಮಂಜುನಾಥ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಬಿರವು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ನಡೆಯಲಿದೆ. ಕ್ಯಾನ್ಸರ್ ಬಗ್ಗೆ ಜನಜಾಗೃತಿ ಮೂಡಿಸಲು ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಪಾಲ್ಗೊಳ್ಳಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
‘ಮಹಿಳೆಯರಲ್ಲಿ ಕೆಲವೊಮ್ಮೆ ಮುಟ್ಟು ನಿಂತ ಮೇಲೆ ಪುನಃ ಅನಿಯಮಿತವಾಗಿ ಮುಟ್ಟಾಗುತ್ತದೆ. ಸ್ತನದಲ್ಲಿ ಗಂಟುಗಳಿದ್ದರೆ ಮುಜುಗರ ಪಟ್ಟುಕೊಳ್ಳದೆ ವೈದ್ಯರನ್ನು ಭೇಟಿ ಮಾಡಬೇಕು. ಕಾಯಿಲೆ 1 ಅಥವಾ 2ನೇ ಹಂತದಲ್ಲಿದ್ದರೆ ಚಿಕಿತ್ಸೆ ಸುಲಭವಾಗುತ್ತದೆ’ ಎಂದು ಸಂತೋಷ ಕುಮಾರ್ ಹೇಳಿದರು.
ವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಈಗಾಗಲೇ 1,840 ಜನಕ್ಕಿಂತ ಹೆಚ್ಚಿನ ರೋಗಿಗಳಿಗೆ ರೇಡಿಯೇಷನ್ ಚಿಕಿತ್ಸೆ ನೀಡಲಾಗಿದೆ. ಪ್ರತಿ ತಿಂಗಳು 40ರಿಂದ 50 ಸರ್ಜರಿ ಮಾಡಲಾಗುತ್ತಿದೆ. 600ರಿಂದ 800 ರೋಗಿಗಳಿಗೆ ಕೀಮೊಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಯಲ್ಲಿ ಎಪಿಎಲ್, ಬಿಪಿಎಲ್ ರೇಷನ್ ಕಾರ್ಡ್, ಯಶಸ್ವಿನಿ ಯೋಜನೆ, ಆಯುಷ್ಮಾನ್, ಖಾಸಗಿ ಇನ್ಶೂರೆನ್ಸ್ ಹಾಗೂ ಶಿಕ್ಷಕ-ಶಿಕ್ಷಕಿಯರಿಗಾಗಿ ಸರ್ಕಾರ ಜಾರಿಗೆ ತಂದಿರುವ ಜ್ಯೋತಿ ಸಂಜೀವಿನಿ ಯೋಜನೆ ಫಲಾನುಭವಿಗಳಿಗೆ ಚಿಕಿತ್ಸೆಗೆ ಪರಿಗಣಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಮೊ. ಸಂಖ್ಯೆ: 94806 96834, 97424 55516 ಸಂಪರ್ಕಿಸಲು ಆಸ್ಪತ್ರೆಯ ಸಂಪರ್ಕಾಧಿಕಾರಿ ಸತೀಶ್ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.