ಹರಿಹರ: ತಾಲ್ಲೂಕಿನಲ್ಲಿ ಬಿತ್ತನೆ ಮಾಡಿರುವ ಮೆಕ್ಕೆಜೋಳ, ಜೋಳ, ಅಲಸಂದೆ, ಸೋಯಾಬೀನ್ ಮತ್ತು ತೊಗರಿ ಬೆಳೆಗಳಿಗೆ ಲದ್ದಿ ಹುಳು ಬಾಧೆ ಕಂಡು ಬಂದಿದ್ದು ಹತೋಟಿ ರೈತರು ಕ್ರಮ ಕೈಗೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎ.ನಾರನಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲದ್ದಿ ಹುಳುವಿನಿಂದ ಶೇ 10ರಷ್ಟು (ಪ್ರತಿ 100 ಗಿಡಗಳಿಗೆ 10 ಗಿಡಗಳು) ಹಾನಿಯಾಗಿದ್ದಲ್ಲಿ ಶೇ 5ರ ಬೇವಿನ ಕಷಾಯ (ಅಜಾಡಿರೆಕ್ಟೀನ್ 1,500 ಪಿಪಿಎಂ) 5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಯಿಸಿ ಸಿಂಪಡಿಸಬೇಕು. ಲದ್ದಿ ಹುಳುವಿನಿಂದ ಶೇ 20ರಷ್ಟು ಹಾನಿಯಾಗಿದ್ದಲ್ಲಿ ಎಮಾಮೆಕ್ಟಿನ್ ಬೆಂಜೋಯೇಟ್ ಶೇ 5 ಎಸ್.ಜಿ.ಯನ್ನು 0.4 ಗ್ರಾಂ ನಂತೆ ಅಥವಾ ಸ್ಪೈನೋಸಾಡ್ 45 ಎಸ್.ಸಿ. ಅನ್ನು 0.3 ಮಿ.ಲೀ ಅಥವಾ ಥೈರೋಡಿಕಾರ್ಬ ಅನ್ನು 2ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು. ಮುಂಜಾನೆ ಅಥವಾ ಸಂಜೆ ಸಿಂಪಡಣೆ ಕಾರ್ಯ ಕೈಗೊಳ್ಳಬೇಕು.
ವಿಷ ಪ್ರಾಶನದ ಬಳಕೆ: 10 ಕೆ.ಜಿ. ಗೋಧಿ ತೌಡು ಅಥವಾ ಅಕ್ಕಿ ತೌಡಿಗೆ 1 ಕೆ.ಜಿ. ಬೆಲ್ಲ, ಸ್ವಲ್ಪ ನೀರನ್ನು ಬೆರೆಯಿಸಿಟ್ಟು ಮಾರನೇ ದಿನ 100 ಗ್ರಾಂ ಥೈಯೋಡಿಕಾರ್ಬ (ಪ್ರತಿ ಕೆ.ಜಿ. ಗೋಧಿ ತೌಡು ಅಥವಾ ಅಕ್ಕಿ ತೌಡಿಗೆ 10 ಗ್ರಾಂ. ನಂತೆ) ಕೀಟನಾಶಕ ಮಿಶ್ರಣ ಮಾಡಿ ಬೆಳೆಯ ಸುಳಿಗೆ ಸಿಂಪಡಣೆ ಮಾಡಬೇಕು. ಕೀಟನಾಶಕ ಸಿಂಪಡಣೆ ಮಾಡುವಾಗ ಕಡ್ಡಾಯವಾಗಿ ಸುರಕ್ಷಾ ಕವಚಗಳನ್ನು ಬಳಸಬೇಕು. ಸಿಂಪಡಣಾ ದ್ರಾವಣ ದೇಹದ ಮೇಲೆ ಬೀಳದಂತೆ ಹಾಗೂ ಉಸಿರಾಟದ ಮೂಲಕ ದೇಹ ಸೇರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹೆಚ್ಚಿನ ಮಾಹಿತಿಗೆ ಮತ್ತು ರಿಯಾಯತಿ ದರದಲ್ಲಿ ಕೀಟನಾಶಕಕ್ಕಾಗಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.