ಮಲೇಬೆನ್ನೂರು: ಬಾಕಿ ವೇತನ ಪಾವತಿಸುವಂತೆ ಕರ್ನಾಟಕ ನೀರಾವರಿ ನಿಗಮದ 3ನೇ ವಿಭಾಗೀಯ ಕಚೇರಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರು ಒತ್ತಾಯಿಸಿದರು.
ಕಚೇರಿ ಆವರಣದಲ್ಲಿ ನೌಕರರು ಅಧ್ಯಕ್ಷ ಎ.ಕೆ. ಆಂಜನೇಯ ನೇತೃತ್ವದಲ್ಲಿ ಸೋಮವಾರ ಸಭೆ ನಡೆಸಿದ ನೌಕರರು ಬಾಕಿ ವೇತನ ಪಾವತಿಗೆ ಆಗ್ರಹಿಸಿ ಆಗಸ್ಟ್ 16ರಿಂದ ಪ್ರತಿಭಟನೆ ನಡೆಸಲು ನಿರ್ಧರಿಸಿದರು.
5 ತಿಂಗಳಿಂದ ವೇತನ ಪಾವತಿ ಆಗಿಲ್ಲ. ವೇತನ ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಕಟ್ಟಿಲ್ಲ. ಆರೋಗ್ಯದ ಸಮಸ್ಯೆಗೆ ಹಣ ಹೊಂದಿಸುವುದು ಕಷ್ಟವಾಗಿದೆ. ಜಲ ಸಂಪನ್ಮೂಲ ಇಲಾಖೆಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ. ಹೊರಗುತ್ತಿಗೆ ಟೆಂಡರ್ ಪ್ರಕ್ರಿಯೆ ನನೆಗುದ್ದಿಗೆ ಬಿದ್ದಿದೆ ಎಂದು ನೌಕರರು ಆಳಲು ತೋಡಿಕೊಂಡರು.
ಆಗಸ್ಟ್ 16ರಿಂದ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಲು 3 ಉಪ ವಿಭಾಗಗಳ ಹೊರಗುತ್ತಿಗೆ ನೌಕರರು ನಿರ್ಧರಿಸಿದರು. 150ಕ್ಕೂ ಹೆಚ್ಚು ಹೊರ ಗುತ್ತಿಗೆ ನೌಕರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.